ADVERTISEMENT

ಗೋವಾದಲ್ಲಿ ಕನ್ನಡಿಗರ ಮನೆ ನೆಲಸಮ: ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಬಿಜೆಪಿ ಕಿಡಿ

ಪಿಟಿಐ
Published 15 ಏಪ್ರಿಲ್ 2024, 7:50 IST
Last Updated 15 ಏಪ್ರಿಲ್ 2024, 7:50 IST
<div class="paragraphs"><p>ಸಿದ್ದರಾಮಯ್ಯ ಮತ್ತು&nbsp;ಗಿರಿರಾಜ್ ಪೈ ವೆರ್ಣೇಕರ್</p></div>

ಸಿದ್ದರಾಮಯ್ಯ ಮತ್ತು ಗಿರಿರಾಜ್ ಪೈ ವೆರ್ಣೇಕರ್

   

ಚಿತ್ರ ಕೃಪೆ(ವೆರ್ಣೇಕರ್): @girirajpai

ಪಣಜಿ: ಗೋವಾದ ಸಂಗೋಲ್ಡಾದಲ್ಲಿ ಕನ್ನಡಿಗರಿಗೆ ಸೇರಿದ ಮನೆಗಳನ್ನು ನೆಲಸಮಗೊಳಿಸಲಾಗಿದೆ ಎಂಬ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಗೋವಾ ಬಿಜೆಪಿ ವಕ್ತಾರ ಗಿರಿರಾಜ್ ಪೈ ವೆರ್ಣೇಕರ್ ಆಕ್ರೋಶ ವ್ಯಕ್ತಪಡಿಸಿದ್ದು, ತಮ್ಮ ರಾಜ್ಯದ ಸಮಸ್ಯೆಗಳ ಬಗ್ಗೆ ಮೊದಲು ಗಮನಕೊಡಲಿ ಎಂದಿದ್ದಾರೆ.

ADVERTISEMENT

ಉತ್ತರ ಗೋವಾ ಜಿಲ್ಲೆಯ ಸಂಗೋಲ್ಡಾ ಗ್ರಾಮದಲ್ಲಿ ಕಮ್ಯುನಿಡೇಡ್‌ಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಒಟ್ಟು 22 ಮನೆಗಳನ್ನು ಶುಕ್ರವಾರ ಅಧಿಕಾರಿಗಳು ನೆಲಸಮಗೊಳಿಸಿದ್ದರು.

ಈ ಕುರಿತು ಎಕ್ಸ್‌ನಲ್ಲಿ ಕಳವಳ ವ್ಯಕ್ತಪಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ನೆಲಸಮ ಕಾರ್ಯಾಚರಣೆ ಕುರಿತ ಪತ್ರಿಕಾ ವರದಿಯನ್ನು ಹಂಚಿಕೊಂಡಿದ್ದರು.

‘ಗೋವಾದ ಸಂಗೋಲ್ಡಾದಲ್ಲಿ ಕನ್ನಡಿಗರ ಮನೆಗಳು ಧ್ವಂಸಗೊಂಡಿರುವುದು ತೀವ್ರ ಕಳವಳಕಾರಿಯಾಗಿದೆ. ಪರ್ಯಾಯ ಕ್ರಮಗಳನ್ನು ಒದಗಿಸುವವರೆಗೆ ಮುಂದಿನ ಕಾರ್ಯಾಚರಣೆಯನ್ನು ತಕ್ಷಣವೇ ನಿಲ್ಲಿಸುವಂತೆ ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಅವರಿಗೆ ಮನವಿ ಮಾಡುತ್ತೇನೆ. ಸ್ಥಳಾಂತರಗೊಂಡ ಕುಟುಂಬಗಳಿಗೆ ಸೂಕ್ತ ಪುನರ್ವಸತಿ ಒದಗಿಸುವಂತೆಯೂ ಕೇಳಿಕೊಳ್ಳುತ್ತೇನೆ’ ಎಂದು ಹೇಳಿದ್ದರು.

ಸಿದ್ದರಾಮಯ್ಯ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ವೆರ್ಣೇಕರ್, ‘ಬರಗಾಲದಿಂದ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ಕರ್ನಾಟಕದ ಮುಖ್ಯಮಂತ್ರಿಗೆ ತನ್ನ ಸ್ವಂತ ಜನರನ್ನು ನೋಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಮೊದಲು ತಮ್ಮ ರಾಜ್ಯದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಿ’ ಎಂದು ಕುಟುಕಿದರು.

‘ಸಂಗೋಲ್ಡಾದಲ್ಲಿ ಅನಧಿಕೃತವಾಗಿ ನಿರ್ಮಿಸಿದ ಮನೆಗಳ ವಿರುದ್ಧ ಕಮ್ಯುನಿಡೇಡ್ ನ್ಯಾಯಾಲಯದ ಮೆಟ್ಟಿಲೇರಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಮನೆಗಳನ್ನು ನೆಲಸಮಗೊಳಿಸಲಾಗಿದೆ. ಸಾಧ್ಯವಿರುವ ಎಲ್ಲ ನೆರವು ನೀಡುವುದಾಗಿ ಗೋವಾ ಮುಖ್ಯಮಂತ್ರಿ ಈಗಾಗಲೇ ಭರವಸೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.