
ಎಐಎಂಐಎಂ
ಅಮರಾವತಿ (ಮಹಾರಾಷ್ಟ್ರ): ಇಲ್ಲಿನ ನಗರಪಾಲಿಕೆ ಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಎಐಎಂಐಎಂ ಪಕ್ಷದ ಪಾಲಿಕೆ ಸದಸ್ಯೆ ಬೆಂಬಲ ನೀಡಿದ್ದಾರೆ.
ಈ ಘಟನೆ ಬೆನ್ನಲ್ಲೆ ಎಐಎಂಐಎಂ ತನ್ನ ಪಕ್ಷದ ಪಾಲಿಕೆ ಸದಸ್ಯೆ ಮೀರಾ ಕಾಂಬ್ಳೆ ಅವರನ್ನು ಉಚ್ಚಾಟನೆ ಮಾಡಿದೆ. ಹಾಗೂ ಸ್ಥಳೀಯ ನಾಯಕರಿಗೆ ಷೋಕಾಸ್ ನೋಟಿಸ್ ನೀಡಲಾಗಿದೆ ಎಂದು ಪಕ್ಷದ ವಕ್ತಾರರು ಭಾನುವಾರ ತಿಳಿಸಿದ್ದಾರೆ.
‘ಅಮರಾವತಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿತ್ತು. ಆದರೆ ಮೇಯರ್ ಆಯ್ಕೆಗೆ ಸದಸ್ಯ ಬಲದ ಕೊರತೆ ಇತ್ತು. 15 ಸ್ಥಾನಗಳನ್ನು ಗೆದಿದ್ದ ವೈಎಸ್ಪಿ ಹಾಗೂ ಮೂರು ಸ್ಥಾನಗಳನ್ನು ಪಡೆದಿದ್ದ ಶಿವಸೇನಾ (ಶಿಂದೆ) ಸಹಕಾರದಿಂದ ಮೇಯರ್ ಚುನಾವಣೆಗೆ ಅಭ್ಯರ್ಥಿಯನ್ನು ಘೋಷಿಸಿತ್ತು. ಆದಾಗ್ಯೂ ಬಿಜೆಪಿ ಒಂದು ಸ್ಥಾನದ ಕೊರೆತೆ ಇತ್ತು.
ಈ ನಡುವೆ 12 ಸ್ಥಾನ ಗಳಿಸಿರುವ ಎಐಎಂಐಎಂ ಮೇಯರ್ ಮತ್ತು ಉಪಮೇಯರ್ ಆಯ್ಕೆ ಪ್ರಕ್ರಿಯೆಯಲ್ಲಿ ತಟಸ್ಥವಾಗಿ ಇರಲು ನಿರ್ಧರಿಸಿತ್ತು. ಆದರೆ ಮೀರಾ ಅವರು ಬಿಜೆಪಿ ಅಭ್ಯರ್ಥಿ ಶ್ರೀಚಾಂದ್ ತೇಜ್ವಾನಿ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಈ ಮೂಲಕ ಶ್ರೀಚಾಂದ್ ಮೇಯರ್ ಆದರು.
‘ಮೀರಾ ಅವರನ್ನು ಪಾಲಿಕೆ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲು ಅಗತ್ಯವಾದ ಪ್ರಕ್ರಿಯೆಯನ್ನು ಕೂಡ ಆರಂಭಿಸಲಾಗಿದೆ. ಪಕ್ಷದ ಅಮರಾವತಿ ಘಟದ ಪದಾಧಿಕಾರಿಗಳು ಮತ್ತು ನಾಯಕರಿಗೂ ಷೋಕಾಸ್ ನೋಟಿಸ್ ನೀಡಲಾಗಿದೆ ಎಂದು ಎಐಎಂಐಎಂ ನಾಯಕ ಇಮ್ತಿಯಾಝ್ ಜಲೀಲ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.