ನವದೆಹಲಿ: ದಕ್ಷಿಣ ರಾಜ್ಯಗಳಲ್ಲಿ ಅದರಲ್ಲೂ ಮುಖ್ಯವಾಗಿ ತೆಲಂಗಾಣದಲ್ಲಿ ಬಲ ವೃದ್ಧಿಸಿಕೊಳ್ಳುವತ್ತ ಚಿತ್ತ ಹರಿಸಿರುವ ಬಿಜೆಪಿ, ಇದಕ್ಕಾಗಿ ಹೈದರಾಬಾದ್ನಲ್ಲಿ ರಾಷ್ಟ್ರೀಯ ಕಾರ್ಯಕಾರಿಣಿ ಹಮ್ಮಿಕೊಂಡಿದೆ.
ಶನಿವಾರ (ಜುಲೈ 2) ಆರಂಭವಾಗಲಿರುವ ಕಾರ್ಯಕಾರಿಣಿ ಭಾನುವಾರ ಮುಕ್ತಾಯವಾಗಲಿದೆ.
ಬಿಜೆಪಿಯು 5 ವರ್ಷಗಳ ನಂತರ ದೆಹಲಿ ಬಿಟ್ಟು ಬೇರೊಂದು ನಗರದಲ್ಲಿ ಭೌತಿಕವಾಗಿ ಈ ಕಾರ್ಯಕಾರಿಣಿ ಹಮ್ಮಿಕೊಂಡಿದೆ. ಹೈದರಾಬಾದ್ನಲ್ಲಿ 18 ವರ್ಷಗಳ ನಂತರ ಸಭೆ ನಿಗದಿಯಾಗಿದೆ.
ತೆಲಂಗಾಣದಲ್ಲಿ ನಡೆದ ಹಿಂದಿನ ಕೆಲ ಚುನಾವಣೆಗಳಲ್ಲಿ ಪಕ್ಷವು ಉತ್ತಮ ಸಾಧನೆ ಮಾಡಿತ್ತು. 2020ರಲ್ಲಿ ನಡೆದಿದ್ದ ಗ್ರೇಟರ್ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಒಟ್ಟು 48 ಸ್ಥಾನಗಳನ್ನು ಗೆದ್ದಿತ್ತು. ಇದೇ 3ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ನಲ್ಲಿ ಬೃಹತ್ ರ್ಯಾಲಿ ನಡೆಸಲಿದ್ದಾರೆ.
ಕಾರ್ಯಕಾರಿಣಿ ವೇಳೆ ತೆಲಂಗಾಣದ ಸಾಂಸ್ಕೃತಿಕ ವೈಭವ ಪ್ರದರ್ಶಿಸಲು ಬಿಜೆಪಿ ಸಿದ್ಧತೆ ನಡೆಸಿದೆ. ಪೇರಿಣಿ ಶಿವತಾಂಡವ, ಭರತನಾಟ್ಯ, ಕೂಚಿಪುಡಿ ಸೇರಿದಂತೆ ವಿವಿಧ ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸ್ಥಳೀಯ ಮತದಾರರ ಮನಗೆಲ್ಲಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.