ADVERTISEMENT

ರಾಜ್ಯಪಾಲರನ್ನು ಕಾರ್ಯಕರ್ತರಂತೆ ನಡೆಸಿಕೊಳ್ಳುತ್ತಿರುವ ಬಿಜೆಪಿ: ಖರ್ಗೆ ಕಿಡಿ

ಪಿಟಿಐ
Published 11 ಜನವರಿ 2023, 12:57 IST
Last Updated 11 ಜನವರಿ 2023, 12:57 IST
ಮಲ್ಲಿಕಾರ್ಜುನ ಖರ್ಗೆ 
ಮಲ್ಲಿಕಾರ್ಜುನ ಖರ್ಗೆ    

ನವದೆಹಲಿ: ‘ಬಿಜೆಪಿಯು ರಾಜ್ಯಪಾಲರನ್ನು ತನ್ನ ಕಾರ್ಯಕರ್ತರಂತೆ ನಡೆಸಿಕೊಳ್ಳುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಕಿಡಿಕಾರಿದ್ದಾರೆ.

ತಮಿಳುನಾಡಿನಲ್ಲಿ ಆಡಳಿತಾರೂಢ ಡಿಎಂಕೆ ಹಾಗೂ ರಾಜ್ಯಪಾಲ ಆರ್‌.ಎನ್‌.ರವಿ ನಡುವಣ ತಿಕ್ಕಾಟ ತೀವ್ರಗೊಂಡಿರುವ ಬೆನ್ನಲ್ಲೇ ಅವರು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

‘ಬಿಜೆಪಿಯು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ರಾಜ್ಯಪಾಲರನ್ನು ತನ್ನ ಕಾರ್ಯಕರ್ತರಂತೆ ನಡೆಸಿಕೊಳ್ಳುವ ಮೂಲಕ ಸಂವಿಧಾನಬದ್ಧವಾಗಿರುವ ರಾಜ್ಯಪಾಲರ ಕಚೇರಿಯನ್ನು ಅವಮಾನಿಸುತ್ತಿದೆ. ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಇತ್ತೀಚೆಗೆ ಕೆಲ ರಾಜ್ಯಪಾಲರು ಒಕ್ಕೂಟ ವ್ಯವಸ್ಥೆಯನ್ನೇ ನಾಶಪಡಿಸಲು ಪ್ರಯತ್ನಿಸಿದ್ದಾರೆ’ ಎಂದು ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ರಾಜ್ಯಪಾಲರಾದವರು ಸಂವಿಧಾನದ ಚೌಕಟ್ಟಿನ ಅಡಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅವರೂ ಕೂಡ ಶಾಸಕಾಂಗದ ಭಾಗವಾಗಿದ್ದು, ಅದಕ್ಕೆ ಅಗೌರವ ತೋರಬಾರದು. ಬಿಜೆಪಿಯೇತರ ರಾಜ್ಯಗಳಲ್ಲಿ ಸಾಮಾಜಿಕ ಹಾಗೂ ರಾಜಕೀಯ ಅಶಾಂತಿ ಸೃಷ್ಟಿಸುವ ಉದ್ದೇಶದಿಂದ ದೆಹಲಿಯಲ್ಲಿರುವ ಮಾಸ್ಟರ್‌ಗಳು ರಾಜ್ಯಪಾಲರನ್ನು ಕೈಗೊಂಬೆಗಳನ್ನಾಗಿ ಮಾಡಿಕೊಂಡಿದ್ದಾರೆ. ಇದು ಅಪಾಯಕಾರಿ’ ಎಂದು ಹೇಳಿದ್ದಾರೆ.

(ಚೆನ್ನೈ ವರದಿ): ‘ರಾಜ್ಯ ಸರ್ಕಾರ ಸಿದ್ಧಪಡಿಸಿಕೊಟ್ಟ ಭಾಷಣವನ್ನು ಓದುವುದು ರಾಜ್ಯಪಾಲರ ಕರ್ತವ್ಯ’ ಎಂದು ತಮಿಳುನಾಡು ವಿಧಾನಸಭೆಯ ಸ್ಪೀಕರ್‌ ಎಂ.ಅಪ್ಪಾವು ಅವರು ಬುಧವಾರ ಸದನಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.