ADVERTISEMENT

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಸ್ವರೂಪ ಪಡೆದುಕೊಂಡ ಬಿಜೆಪಿ ಕಾರ್ಯಕರ್ತನ ಸಾವು

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 3:29 IST
Last Updated 30 ಜುಲೈ 2020, 3:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪೋರ್ ಜಿಲ್ಲೆಯ ಬಿಜೆಪಿ ಕಾರ್ಯಕರ್ತನೊಬ್ಬ ತನ್ನ ಮನೆಯ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

ರಾಮನಗರ ಪ್ರದೇಶದ ಬಿಜೆಪಿಯ ಬೂತ್‌ ಅಧ್ಯಕ್ಷ ಪೂರ್ಣಚಂದ್ರ ದಾಸ್‌ (44) ಮೃತ ವ್ಯಕ್ತಿ. ‘ಪೂರ್ಣಚಂದ್ರ ದಾಸ್‌ ಅವರದ್ದು ಆತ್ಮಹತ್ಯೆಯಲ್ಲ, ಕೊಲೆ,’ ಎಂದು ಬಿಜೆಪಿ ಆರೋಪಿಸಿದೆ. ‘ತಮ್ಮ ಪಕ್ಷಕ್ಕೆ ಸೇರಲು ನಿರಾಕರಿಸಿದ ಪೂರ್ಣಚಂದ್ರ ಅವರನ್ನು ತೃಣಮೂಲ ಕಾಂಗ್ರಸ್ಸಿನ ಗೂಂಡಾಗಳು ಕೊಂದಿದ್ದಾರೆ,’ ಎಂದು ಬಿಜೆಪಿ ಆರೋಪ ಹೊರಿಸಿದೆ.

ಬಿಜೆಪಿ ಮಾಡಿರುವ ಆರೋಪಗಳನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಿರಾಕರಿಸಿದೆ. ‘ ಆರೋಪ ಸಂಪೂರ್ಣ ಆಧಾರರಹಿತ ಮತ್ತು ರಾಜಕೀಯ ಪ್ರೇರಿತ’ ಎಂದಿರುವ ಟಿಎಂಸಿ, ‘ಪೊಲೀಸ್ ತನಿಖೆಯು ಸತ್ಯವನ್ನು ಹೊರಗೆಳೆಯುತ್ತದೆ,’ ಎಂದಿದೆ.

ADVERTISEMENT

ಟಿಎಂಸಿಯಿಂದ ಒತ್ತಡವಿತ್ತು: ಕುಟುಂಬ ಸದಸ್ಯರು

‘ಸ್ಥಳೀಯ ಟಿಎಂಸಿ ನಾಯಕರು ತಮ್ಮ ಪಕ್ಷಕ್ಕೆ ಸೇರುವಂತೆ ಪೂರ್ಣಚಂದ್ರ ಅವರನ್ನು ಒತ್ತಾಯಿಸುತ್ತಿದ್ದರು. ಆದರೆ, ಅವರು ನಿರಾಕರಿಸಿದ್ದರು. ಇಂದು ಟಿಎಂಸಿ ನಾಯಕರೊಂದಿಗೆ ಸಭೆಯೂ ನಡೆದಿತ್ತು. ಆದರೆ, ರಾತ್ರಿ ಹೊತ್ತಿಗೆ ಅವರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ನಮಗೆ ನ್ಯಾಯಬೇಕು,’ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ, ಬಿಜೆಪಿಯ ಹಿರಿಯ ಮುಖಂಡ ಮತ್ತು ಶಾಸಕ ದೇಬೇಂದ್ರ ನಾಥ್ ರೇ ಅವರು ಉತ್ತರ ಬಂಗಾಳದ ಉತ್ತರ ದಿನಾಜ್‌ಪುರ ಜಿಲ್ಲೆಯ ಅವರ ಮನೆಯ ಬಳಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದು ರಾಜಕೀಯ ಪ್ರೇರಿತ ಕೊಲೆ ಎಂದು ಬಿಜೆಪಿ ಆಗಲೂ ಆರೋಪಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.