ಮುಂಬೈ: ಸೊಕ್ಕಿನ ಕಾರಣದಿಂದ ಬಿಜೆಪಿಗೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಸೋಲು ಎದುರಾಗಿದೆ ಎಂದು ಶಿವಸೇನಾ ಪಕ್ಷವು ಮಂಗಳವಾರ ಆರೋಪಿಸಿದೆ.
ಪಕ್ಷದ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ಈ ಕುರಿತು ಉಲ್ಲೇಖ ಮಾಡಲಾಗಿದ್ದು, ಮಹಾರಾಷ್ಟ್ರದಲ್ಲೂ ಅಸಹಿಷ್ಣುತೆಯಿಂದಾಗಿ ಬಿಜೆಪಿ ಅಧಿಕಾರದಿಂದ ಹೊರಗುಳಿದಿದೆ ಎಂದು ದೂರಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ದುರಹಂಕಾರವೂ ಸೋಲಿಗೆ ಕಾರಣವಾಗಿದೆ. ಈ ಸೋಲಿನಿಂದಾಗಿ ಮಹಾರಾಷ್ಟ್ರ ಉಪಚುನಾವಣೆಯಲ್ಲಿ ಗಳಿಸಿದ ಗೆಲುವನ್ನು ಬಿಜೆಪಿ ಆನಂದಿಸಲು ಸಾಧ್ಯವಾಗಿಲ್ಲ. ಎಲ್ಲರೂ ಬಿಜೆಪಿ ಅಭ್ಯರ್ಥಿಯನ್ನು ಅಭಿನಂದಿಸಿದರು. ಆದರೆ ಯಾವ ಎಂವಿಎ ಮುಖಂಡರು ವಿಜೇತರನ್ನು ಅಭಿನಂದಿಸಿದವರಿಗೆ ಬೆದರಿಕೆ ಹಾಕಲಿಲ್ಲ ಎಂದು ಹೇಳಿದೆ.
ಇತ್ತೀಚಿನ ಪಶ್ವಿಮ ಬಂಗಾಳ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷವು 200ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲುವು ದಾಖಲಿಸಿ ಅಧಿಕಾರಉಳಿಸಿಕೊಂಡಿತ್ತು. ಬಿಜೆಪಿ ತನ್ನ ಸಂಖ್ಯಾ ಬಲವನ್ನು ಉತ್ತಮಗೊಳಿಸಿದರೂ ಗದ್ದುಗೆಗೇರುವ ಕನಸು ಕನಸಾಗಿಯೇ ಉಳಿದಿದೆ.
292 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ 213 ಹಾಗೂ ಬಿಜೆಪಿ 77 ಸ್ಥಾನಗಳಲ್ಲಿ ಗೆಲುವು ದಾಖಲಿಸಿತ್ತು.
ಮಹಾರಾಷ್ಟ್ರ ಯಾವಾಗ ಅಸಹಿಷ್ಣುತೆಗೆ ಒಳಗಾಯಿತು? ಎಂದು ಸಂಪಾದಕೀಯದಲ್ಲಿ ಶಿವಸೇನಾ ಪ್ರಶ್ನಿಸಿದೆ. 2019ರಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯ ಬಳಿಕ ದೀರ್ಘಾವಧಿಯ ಮಿತ್ರ ಪಕ್ಷಗಳಾದ ಶಿವಸೇನೆ ಹಾಗೂ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಳ್ಳುವ ವಿಷಯದಲ್ಲಿ ಭಿನ್ನಮತ ಸ್ಫೋಟಗೊಂಡು ಬೇರ್ಪಟ್ಟಿದ್ದವು.
ಬಳಿಕ ಕಾಂಗ್ರೆಸ್ ಹಾಗೂ ಎನ್ಸಿಪಿ ಜೊತೆ ಒಪ್ಪಂದ ಮಾಡಿದ್ದ ಶಿವಸೇನೆ, ಸರ್ಕಾರ ರಚಿಸಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.