ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
ಪಿಟಿಐ
ಹಾಜಿಪುರ್: ಚುನಾವಣಾ ಕಾರ್ಯತಂತ್ರ ನಿಪುಣ ಪ್ರಶಾಂತ್ ಕಿಶೋರ್ (ಪಿಕೆ) ಅವರ 'ಜನ ಸುರಾಜ್ ಪಕ್ಷ' ಸೇರಿರುವುದಾಗಿ ಬಿಹಾರದ ಮಾಜಿ ಸಚಿವ ಬ್ರಿಷಿನ್ ಪಟೇಲ್ ಭಾನುವಾರ ತಿಳಿಸಿದ್ದಾರೆ.
'ಪಿಕೆ' ಅವರನ್ನು ಶನಿವಾರ ಭೇಟಿಯಾಗಿ, ಪಕ್ಷದ ಸದಸ್ಯತ್ವ ಪಡೆದಿದ್ದ ಪಟೇಲ್, ತಮ್ಮ ತವರು ಜಿಲ್ಲೆ ವೈಶಾಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ್ದಾರೆ.
ಈ ಹಿಂದೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಆಪ್ತರಾಗಿದ್ದ ಪಟೇಲ್, ವೈಶಾಲಿ ವಿಧಾನಸಭೆ ಕ್ಷೇತ್ರವನ್ನು ಹಲವು ಸಲ ಪ್ರತಿನಿಧಿಸಿದ್ದಾರೆ. ಒಂದು ಬಾರಿ ಸಿವಾನ್ನಿಂದ ಲೋಕಸಭೆ ಪ್ರವೇಶಿಸಿದ್ದರು.
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯುಳ್ಳ ಕುಟುಂಬದವರಾಗಿರುವ ಅವರು, ರಾಜ್ಯದಲ್ಲಿ ನಿತೀಶ್ ಕುಮಾರ್ ಅವರ ನಂತರ ಕುರ್ಮಿ ಸಮುದಾಯದ ಪ್ರಬಲ ನಾಯಕರಲ್ಲಿ ಒಬ್ಬರೆನಿಸಿದ್ದಾರೆ.
2005ರಲ್ಲಿ ನಿತೀಶ್ ಕುಮಾರ್ ಮುಖ್ಯಮಂತ್ರಿಯಾದಾಗ, ಜೆಡಿ(ಯು) ಪಕ್ಷದಲ್ಲಿದ್ದ ಪಟೇಲ್ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದರು.
2015ರಲ್ಲಿ ನಿತೀಶ್ ಜೊತೆಗಿನ ಸಂಬಂಧ ಕಡಿದುಕೊಂಡು, ಮಾಜಿ ಸಿಎಂ ಜೀತನ್ ರಾಮ್ ಮಾಂಝಿ ಅವರ ಹಿಂದುಸ್ಥಾನಿ ಅವಾಮ್ ಮೋರ್ಚಾ (ಎಚ್ಎಎಂ) ಸೇರಿದ್ದರು.
ಆದರೆ, 2020ರ ವಿಧಾನಸಭೆ ಚುನಾವಣೆ ಹೊತ್ತಲ್ಲಿ ನಿತೀಶ್ ಹಾಗೂ ಮಾಂಝಿ ಅವರ ಪಕ್ಷಗಳು ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಎನ್ಡಿಎ ಮೈತ್ರಿಕೂಟ ತೊರೆದಿದ್ದ ಪಟೇಲ್, ಲಾಲು ಪ್ರಸಾದ್ ಅವರ ಆರ್ಜೆಡಿ ಸೇರಿದ್ದರು. ಇದೀಗ ಆರ್ಜೆಡಿಗೂ ಗುಡ್ಬೈ ಹೇಳಿದ್ದಾರೆ.
243 ಸದಸ್ಯ ಬಲದ ಬಿಹಾರ ವಿಧಾನಸಭೆಗೆ ಈ ವರ್ಷಾಂತ್ಯದಲ್ಲಿ ಚುನಾವಣೆ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.