ಮುಂಬೈ: ‘ಬುಲ್ಲಿ ಬಾಯಿ’ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಸೈಬರ್ ಘಟಕದ ಪೊಲೀಸರು ಉತ್ತರಾಖಂಡದಲ್ಲಿ ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿ, ಸೈಬರ್ ಘಟಕದ ಪೊಲೀಸರು ಬೆಂಗಳೂರಿನಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ಕುಮಾರ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನನ್ನು ಬಾಂದ್ರ ಮೆಟ್ರೊಪಾಲಿಟನ್ ಕೋರ್ಟ್ಗೆ ಹಾಜರುಪಡಿಸಲಾಗಿದ್ದು, ಜ. 10ರವರೆಗೆ ಆತನನ್ನು ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಕೋರ್ಟ್ ಆದೇಶಿಸಿತು.
ಬೆಂಗಳೂರಿನಲ್ಲಿ ವಿಶಾಲ್ ಕುಮಾರ್ಗೆ ಸಂಬಂಧಪಟ್ಟ ಸ್ಥಳಗಳಲ್ಲಿ ಶೋಧ ಕಾರ್ಯ ಕೈಗೊಳ್ಳಲು ಸಹ ಪೊಲೀಸರಿಗೆ ಕೋರ್ಟ್ ಅನುಮತಿ ನೀಡಿತು.
ಉತ್ತರಾಖಂಡದಲ್ಲಿ ಬಂಧಿಸಲಾಗಿರುವ ಮಹಿಳೆ ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿದೆ. ‘ಬಂಧಿತ ಮಹಿಳೆಯ ವಿಚಾರಣೆ ನಡೆಯುತ್ತಿದೆ. ಉತ್ತರಾಖಂಡದ ಕೋರ್ಟ್ಗೆ ಹಾಜರುಪಡಿಸಿ, ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ಆಕೆಯನ್ನು ಮುಂಬೈಗೆ ಕರೆ ತರಲಾಗುವುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಬಂಧಿತರಿಗೆ ಪರಸ್ಪರರ ಪರಿಚಯವಿದ್ದು, ಪ್ರಕರಣ ಕುರಿತು ತನಿಖೆ ಮುಂದುವರಿದಿದೆ’ ಎಂದು ಹೇಳಿರುವ ಅಧಿಕಾರಿಗಳು,ಬಂಧಿತ ಮಹಿಳೆ ಕುರಿತು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಿಲ್ಲ.
ಪಶ್ಚಿಮ ಮುಂಬೈನ ಸೈಬರ್ ಪೊಲೀಸ್ ಠಾಣೆಯು ‘ಬುಲ್ಲಿ ಬಾಯಿ’ ಅಪ್ಲಿಕೇಷನ್ ಅಭಿವೃದ್ಧಿಪಡಿಸಿದವರು ಮತ್ತು ಈ ಆ್ಯಪ್ ಅನ್ನು ಪ್ರಚಾರ ಮಾಡಿದ ಟ್ವಿಟರ್ ಬಳಕೆದಾರರ ವಿರುದ್ಧ ಪ್ರಕರಣ ದಾಖಲಿಸಿದೆ.
ಈ ಮಧ್ಯೆ, ಈ ಆ್ಯಪ್ ಅನ್ನು ಅಭಿವೃದ್ಧಿಪಡಿಸಿರುವವರ ಕುರಿತು ದೆಹಲಿ ಪೊಲೀಸರು ಗಿಟ್ಹಬ್ ವೇದಿಕೆಯಿಂದ ಮಾಹಿತಿ ಕೇಳಿದ್ದು, ಆ್ಯಪ್ ಬಗ್ಗೆ ಮೊದಲು ಟ್ವೀಟ್ ಮಾಡಿರುವ ವ್ಯಕ್ತಿಯ ಖಾತೆಯ ಬಗ್ಗೆ ವಿವರ ನೀಡುವಂತೆ ಟ್ವಿಟರ್ ಸಂಸ್ಥೆಗೂ ಪತ್ರ ಬರೆದಿದ್ದಾರೆ.
ಏನಿದು ಪ್ರಕರಣ?: ‘ಬುಲ್ಲಿ ಬಾಯ್’ಆ್ಯಪ್ಗೆ 100ಕ್ಕೂ ಹೆಚ್ಚು ಪ್ರಭಾವಿ ಮುಸ್ಲಿಂ ಮಹಿಳೆಯರ ಭಾವಚಿತ್ರಗಳನ್ನುಅಪ್ಲೋಡ್ ಮಾಡಿ ಇವರನ್ನು ಹರಾಜಿಗಿಡಲಾಗಿದೆ ಎಂಬ ಒಕ್ಕಣೆಯೊಂದಿಗೆ ಅವಹೇಳನ ಮಾಡಿರುವುದು ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದೆ.
ಈ ಸಂಬಂಧ ಪತ್ರಕರ್ತೆಯೊಬ್ಬರು ನೀಡಿರುವ ದೂರಿನ ಆಧಾರದಲ್ಲಿ ದೆಹಲಿ ಪೊಲೀಸರು ಭಾನುವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಕುರಿತು ಮುಂಬೈನ ಸೈಬರ್ ಕ್ರೈಂ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ. ಬಳಿಕ ಈ ಆ್ಯಪ್ ಅನ್ನು ನಿರ್ಬಂಧಿಸಲಾಗಿದೆ.
‘ಬುಲ್ಲಿ ಬಾಯ್’ಆ್ಯಪ್ ಅನ್ನು ನಿರ್ಬಂಧಿಸಿರುವುದಾಗಿ ಗಿಟ್ಹಬ್ ವೇದಿಕೆಯು ದೃಢಪಡಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.