ADVERTISEMENT

ಐದು ರಾಜ್ಯ, ಕೇಂದ್ರಾಡಳಿತ ಪ್ರದೇಶದಲ್ಲಿ ಉಪಚುನಾವಣೆ: ಶಾಂತಿಯುತ ಮತದಾನ

ಪಿಟಿಐ
Published 23 ಜೂನ್ 2022, 6:17 IST
Last Updated 23 ಜೂನ್ 2022, 6:17 IST
ತ್ರಿಪುರಾದಲ್ಲಿ ಬಿಗಿ ಭದ್ರತೆಯಲ್ಲಿ ಮತದಾನ
ತ್ರಿಪುರಾದಲ್ಲಿ ಬಿಗಿ ಭದ್ರತೆಯಲ್ಲಿ ಮತದಾನ   

ನವದೆಹಲಿ: ಐದು ರಾಜ್ಯ ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಲೋಕಸಭೆಯ ಮೂರು ಹಾಗೂ ವಿಧಾನಸಭೆಯ ಏಳು ಸ್ಥಾನಗಳಿಗೆ ಗುರುವಾರ ಉಪಚುನಾವಣೆ ನಡೆಯುತ್ತಿದೆ.

ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಾಹಾ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಮೊದಲೆರಡು ತಾಸಿನಲ್ಲಿ ಮತದಾನ ಶಾಂತಿಯುವಾಗಿ ಸಾಗಿದೆ.

ದೆಹಲಿ, ಉತ್ತರ ಪ್ರದೇಶ, ಪಂಜಾಬ್, ತ್ರಿಪುರಾ, ಆಂಧ್ರಪ್ರದೇಶ ಹಾಗೂ ಜಾರ್ಖಂಡ್ ಉಪಚುನಾವಣೆಯ ಮತ ಎಣಿಕೆ ಭಾನುವಾರ ನಡೆಯಲಿದೆ.

ADVERTISEMENT

ಪಂಜಾಬ್‌ನ ಸಂಗ್ರೂರ್ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು (ಎಎಪಿ) ಶಕ್ತಿ ಪ್ರದರ್ಶನದ ಸವಾಲನ್ನು ಎದುರಿಸುತ್ತಿದೆ.

ವಿಧಾನಸಭೆ ಚುನಾವಣೆಯಲ್ಲಿ ಪ್ರಚಂಡ ಗೆಲುವು ಬಾರಿಸಿರುವ ಎಎಪಿ ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ವಹಿಸಿಕೊಂಡಿತ್ತು. ಆದರೆ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣವು ಹಿನ್ನಡೆಗೆ ಕಾರಣವಾಗಿದೆ.

ಉತ್ತರ ಪ್ರದೇಶದಲ್ಲಿ ವಿರೋಧಪಕ್ಷ ಸಮಾಜವಾದಿ ಪಕ್ಷದ (ಎಸ್‌ಪಿ) ಭದ್ರಕೋಟೆ ಎಂದು ಪರಿಗಣಿಸಲಾದ ಲೋಕಸಭೆ ಕ್ಷೇತ್ರಗಳಾದ ಅಜಂಗಢ ಹಾಗೂ ರಾಂಪುರದಲ್ಲಿ ಉಪಚುನಾವಣೆ ನಡೆಯುತ್ತಿದೆ.

ಈ ಕ್ಷೇತ್ರಗಳಲ್ಲಿ ಮೊದಲೆರಡು ತಾಸಿನಲ್ಲಿ ಸರಾಸರಿ ಶೇ 8ರಷ್ಟು ಮತದಾನವಾಗಿದೆ.

ವರ್ಷಾರಂಭದಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಶಾಸಕರಾಗಿ ಆಯ್ಕೆಯಾದ ಬಳಿಕ ಅವರಿಂದ ತೆರವಾಗಿರುವ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.

ತ್ರಿಪುರಾದಲ್ಲಿ ವಿಧಾನಸಭೆ ಕ್ಷೇತ್ರಗಳಾದ ಅಗರ್ತಲಾ, ಟೌನ್ ಬರ್ದೊವಾಲಿ, ಸುರ್ಮ ಹಾಗೂ ಜುಬರಾಜನಗರದಲ್ಲಿ ಉಪಚುನಾವಣೆ ಪ್ರಗತಿಯಲ್ಲಿದೆ.

ಆಂಧ್ರಪ್ರದೇಶದ ಆತ್ಮಕೂರು ವಿಧಾನಸಭಾ ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ಮೊದಲ ಎರಡು ತಾಸುಗಳಲ್ಲಿ ಶೇ 12ರಷ್ಟು ಮತದಾನವಾಗಿದೆ.

ದೆಹಲಿಯಲ್ಲಿ ರಾಜಿಂದರ್ ನಗರ ಮತ್ತು ಜಾರ್ಖಂಡ್‌ನಲ್ಲಿ ಬಿಗಿ ಭದ್ರತೆಯಲ್ಲಿ ಮಂದರ್ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.