ಇಂದೋರ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಆರ್ಎಸ್ಎಸ್ ಮುಖಂಡರ ಕಾರ್ಟೂನ್ಗಳನ್ನು ರಚಿಸಿದ್ದನ್ನು ಆಕ್ಷೇಪಿಸಿರುವ ಪ್ರಕರಣದಲ್ಲಿ ಕಾರ್ಟೂನಿಸ್ಟ್ ಹೇಮಂತ್ ಮಾಳವೀಯ ಅವರಿಗೆ ಮಧ್ಯಪ್ರದೇಶ ಹೈಕೋರ್ಟ್ ಜಾಮೀನು ನಿರಾಕರಿಸಿದೆ.
ನಗರದ ಹವ್ಯಾಸಿ ಕಾರ್ಟೂನಿಸ್ಟ್ ಹೇಮಂತ್ ವಿರುದ್ಧ ಸ್ಥಳೀಯ ವಕೀಲ ಹಾಗೂ ಆರ್ಎಸ್ಎಸ್ನ ಕಾರ್ಯಕರ್ತ ವಿನಯ್ ಜೋಷಿ ನೀಡಿದ ದೂರು ಆಧರಿಸಿ ಲಸುಡಿಯಾ ಠಾಣೆಯಲ್ಲಿ ಮೇ ತಿಂಗಳಲ್ಲಿ ಪ್ರಕರಣ ದಾಖಲಾಗಿತ್ತು.
ಹೇಮಂತ್ ಮಾಳವೀಯ ಅವರು ತಮ್ಮ ಕಾರ್ಟೂನ್ನಲ್ಲಿ ಭಗವಾನ್ ಶಿವ, ಆರ್ಎಸ್ಎಸ್, ಮೋದಿ ವಿರುದ್ಧ ಆಕ್ಷೇಪಾರ್ಹ ಪದಗಳನ್ನು ಬರೆಯುವ ಮೂಲಕ ಹಿಂದೂಗಳ ಧಾರ್ಮಿಕ ನಂಬಿಕೆಗಳಿಗೆ ಗಾಸಿಯಾಗಿದ್ದು, ಕೋಮು ಸಾಮರಸ್ಯಕ್ಕೆ ಧಕ್ಕೆಯಾಗಿದೆ ಎಂದು ದೂರಿನಲ್ಲಿ ವಿನಯ್ ತಿಳಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್ನ ಇಂದೋರ್ ಪೀಠದ ನ್ಯಾಯಮೂರ್ತಿ ಸುಬೋಧ್ ಅಭ್ಯಂಕರ್, ‘ಇದು ಉದ್ದೇಶಪೂರ್ವಕವಾಗಿ ಜನರ ಧಾರ್ಮಿಕ ನಂಬಿಕೆಗಳನ್ನು ಗಾಸಿಗೊಳಿಸುವ ಪ್ರಯತ್ನವಾಗಿದ್ದು, ವಾಕ್ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು ತಿಳಿಸಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.