ADVERTISEMENT

ಹಣ ದುರ್ಬಳಕೆ: ಜಿವಿಕೆ ಗ್ರೂಪ್‍ ಅಧ್ಯಕ್ಷ, ಪುತ್ರನ ವಿರುದ್ಧ ಸಿಬಿಐ ಮೊಕದ್ದಮೆ

ಪಿಟಿಐ
Published 2 ಜುಲೈ 2020, 8:25 IST
Last Updated 2 ಜುಲೈ 2020, 8:25 IST
ಸಿಬಿಐ ಲಾಂಛನ
ಸಿಬಿಐ ಲಾಂಛನ   

ನವದೆಹಲಿ: ವಿಮಾನನಿಲ್ದಾಣ ಉನ್ನತೀಕರಣ, ನಿರ್ವಹಣೆಕುರಿತು ನಡೆದ ₹ 705 ಕೋಟಿ ಅವ್ಯವಹಾರ ಸಂಬಂಧ ಜಿವಿಕೆ ಗ್ರೂಪ್‍ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ ಗುಣುಪತಿ ಮತ್ತು ಅವರ ಪುತ್ರನ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ. ಪುತ್ರ ಜಿ.ವಿ.ಸಂಜಯ್ ರೆಡ್ಡಿ ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಮುಂಬೈ ಅಂತರರಾಷ್ಟ್ರೀಯ ವಿಮಾನನಿಲ್ದಾಣದ (ಎಂಐಎಎಲ್‍) ಉನ್ನತೀಕರಣ ಮತ್ತು ಮೇಲ್ವಿಚಾರಣೆ ಸಂಬಂಧ ಜಿವಿಕೆ ಗ್ರೂಪ್‍ ಭಾಗವಾಗಿರುವ ಜಿವಿ‌ಕೆ ಏರ್ ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್‍ ಜೊತೆಗೆ ಜಂಟಿ ಉದ್ಯಮ ಸ್ಥಾಪಿಸಿತ್ತು.

2006ರ ಏಪ್ರಿಲ್ 4 ರಂದು ಭಾರತ ವಿಮಾನ ಪ್ರಾಧಿಕಾರವು ಎಂಐಎಎಲ್‍ ಜೊತೆಗೆ ಮುಂಬೈ ವಿಮಾನನಿಲ್ದಾಣದ ಆಧುನೀಕರಣ, ಮೇಲ್ವಿಚಾರಣೆ, ನಿರ್ವಹಣೆ ಕುರಿತಂತೆ ಒಡಂಬಡಿಕೆ ಮಾಡಿಕೊಂಡಿತ್ತು.

ADVERTISEMENT

ಜಿವಿಕೆ ಗ್ರೂಪ್‍ ಸಂಸ್ಥೆಯ ಪ್ರವರ್ತಕರು ಹಾಗೂ ಎಎಐ ಅಧಿಕಾರಿಗಳ ಸಹಕಾರದಲ್ಲಿ ಭಿನ್ನ ಮಾರ್ಗಗಳಲ್ಲಿ ಹಣ ವರ್ಗಾವಣೆ, ದುರ್ಬಳಕೆಗೆ ಕಾರಣರಾಗಿದ್ದರು. ಜಿವಿಕೆ ಗ್ರೂಪ್‍ ಎಂಐಎಎಲ್‍ನ ಸುಮಾರು ₹395 ಕೋಟಿ ಮೀಸಲು ನಿಧಿಯನ್ನು ದುರ್ಬಳಕೆ ಮಾಡಿಕೊಂಡಿತ್ತು ಎಂದು ಸಿಬಿಐ ಆರೋಪಿಸಿದೆ.

ಎಂಎಐಎಲ್‍ ಸಿಬ್ಬಂದಿ ಅಲ್ಲದವರಿಗೂ ವೇತನ, ವೆಚ್ಚ ಪಾವತಿಸುವ ಮೂಲಕ ವಿಮಾನನಿಲ್ದಾಣದ ಆದಾಯಕ್ಕೆ ಧಕ್ಕೆ ತರಲಾಗಿದೆ. ಎಂಎಐಎಲ್‍ ನಿಧಿ ಬಳಸಿ ವೈಯಕ್ತಿಕ, ಕೌಟುಂಬಿಕ ವೆಚ್ಚವನ್ನು ನಿಭಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಈ ಇಬ್ಬರಲ್ಲದೇ ಎಂಐಎಎಲ್‍, ಜಿವಿಕೆ ಏರ್ ಪೋರ್ಟ್ ಹೋಲ್ಡಿಂಗ್ ಲಿಮಿಟೆಡ್ ಹಾಗೂ ಒಂಬತ್ತು ಇತರೆ ಖಾಸಗಿ ಕಂಪನಿಗಳು, ಎಎಐನ ಹಲವು ಅಧಿಕಾರಿಗಳ ವಿರುದ್ಧವೂ ಮೊಕದ್ದಮೆ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.