ADVERTISEMENT

ಬ್ಯಾಂಕ್‌ ಲಾಕರ್ ಶೋಧದ ಬಳಿಕ ಸಿಬಿಐ ಕ್ಲೀನ್‌ಚಿಟ್ ನೀಡಿದೆ: ಮನೀಶ್ ಸಿಸೋಡಿಯಾ

ಪಿಟಿಐ
Published 30 ಆಗಸ್ಟ್ 2022, 9:20 IST
Last Updated 30 ಆಗಸ್ಟ್ 2022, 9:20 IST
ಮನೀಶ್ ಸಿಸೋಡಿಯಾ
ಮನೀಶ್ ಸಿಸೋಡಿಯಾ   

ನವದೆಹಲಿ: ‘ಬ್ಯಾಂಕ್ ಲಾಕರ್ ಅನ್ನು ಪರಿಶೀಲಿಸಿದ ಬಳಿಕ ಸಿಬಿಐ ನನಗೆ ಕ್ಲೀನ್‌ಚಿಟ್ ನೀಡಿದೆ’ ಎಂದು ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮಂಗಳವಾರ ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿ ಅಕ್ರಮದ ಆರೋಪದ ಹಿನ್ನೆಲೆಯಲ್ಲಿ ಮನೀಶ್‌ ಸಿಸೋಡಿಯಾ ಅವರ ನಿವಾಸ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ಕಳೆದ ವಾರ ದಾಳಿ ನಡೆಸಿದ್ದರು. ಇದರ ಮುಂದುವರಿದ ಭಾಗವಾಗಿ ಸಿಸೋಡಿಯಾ ಅವರ ಬ್ಯಾಂಕ್ ಲಾಕರ್ ಅನ್ನು ಸಿಬಿಐ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ.

ನಾಲ್ಕು ಮಂದಿ ಅಧಿಕಾರಿಗಳ ತಂಡ ಗಾಜಿಯಾಬಾದ್‌ನ ವಸುಂಧರಾದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ ಶಾಖೆಯಲ್ಲಿರುವ ಲಾಕರ್‌ ಅನ್ನು ಪರಿಶೀಲನೆ ನಡೆಸಿತು. ಈ ವೇಳೆ ಸಿಸೋಡಿಯಾ ಹಾಗೂ ಅವರ ಪತ್ನಿ ಇದ್ದರು.

ದೆಹಲಿ ಅಬಕಾರಿ ನೀತಿ ಅಕ್ರಮದ ಆರೋಪಕ್ಕೆ ಸಂಬಂಧಿಸಿ 15 ಮಂದಿ ಹಾಗೂ ಸಂಸ್ಥೆಗಳ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಅದರಲ್ಲಿ ಸಿಸೋಡಿಯಾ ಸಹ ಒಬ್ಬರು.

ಶೋಧ ಪ್ರಕ್ರಿಯೆ ಮುಗಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಸೋಡಿಯಾ, ಸಿಬಿಐ ಒತ್ತಡದಿಂದ ಕಾರ್ಯನಿರ್ವಹಿಸುತ್ತಿದೆ. ಸಿಬಿಐಯಿಂದ ಕ್ಲೀನ್‌ಚಿಟ್ ದೊರೆತಿರುವುದರಿಂದ ಸಂತಸವಾಗಿದೆ. ಅವರಿಗೆ ನನ್ನ ಮನೆಯಲ್ಲಾಗಲೀ ಲಾಕರ್‌ನಲ್ಲಾಗಲಿ ಏನೂ ಸಿಗಲಿಲ್ಲ’ ಎಂದು ಹೇಳಿದ್ದಾರೆ.

‘ನಮ್ಮ ಬ್ಯಾಂಕ್ ಲಾಕರ್ ಪರಿಶೀಲಿಸಲು ಸಿಬಿಐ ಬರಲಿದೆ. ಆಗಸ್ಟ್ 19 ರಂದು ನನ್ನ ನಿವಾಸದಲ್ಲಿ 14 ಗಂಟೆಗಳ ಕಾಲ ನಡೆದ ಶೋಧದಲ್ಲಿ ಅವರಿಗೆ ಏನೂ ಸಿಗಲಿಲ್ಲ. ಲಾಕರ್‌ನಲ್ಲಿಯೂ ಏನೂ ಸಿಗುವುದಿಲ್ಲ. ನಾನು ಸಿಬಿಐ ಅಧಿಕಾರಿಗಳನ್ನು ಸ್ವಾಗತಿಸುತ್ತೇನೆ. ನನ್ನ ಕುಟುಂಬ ಹಾಗೂ ನಾನು ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ’ ಎಂದು ಸಿಸೋಡಿಯಾ ಸೋಮವಾರ ಟ್ವೀಟ್‌ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.