ಮುಂಬೈ: ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಬಾಲಿವುಡ್ ಸಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಆರಂಭಿಸಿರುವ ಸಿಬಿಐ, ಮೃತ ನಟನಸಿಬ್ಬಂದಿಯೊಬ್ಬರನ್ನು ಸತತ ಎರಡನೇ ದಿನವೂ ವಿಚಾರಣೆಗೆ ಒಳಪಡಿಸಿತು.
ಶುಕ್ರವಾರದಿಂದ ಸಿಬಿಐ ಪ್ರಕರಣದ ತನಿಖೆಗೆ ಕೈಗೆತ್ತಿಕೊಂಡಿದೆ. ಇದಕ್ಕಾಗಿ 10 ಜನರಿರುವ ವಿಶೇಷ ತಂಡವೊಂದು ಮುಂಬೈಗೆ ಬಂದಿಳಿದಿದೆ.
ಡಿಆರ್ಡಿಒ ಕಚೇರಿಯಲ್ಲಿ ಸುಶಾಂತ್ ಅವರ ಬಾಣಸಿಗನನ್ನು ಸಿಬಿಐ ಸುದೀರ್ಘ ವಿಚಾರಣೆಗೆ ಒಳಪಡಿಸಿತು. ಇತರ ಸಿಬ್ಬಂದಿ ಮತ್ತು ಕೆಲ ಗೆಳೆಯರನ್ನೂ ಸಿಬಿಐ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ. ಜೂನ್ 14ರಂದು ಸುಶಾಂತ್ ಬಾಂದ್ರಾದ ತಮ್ಮ ಮನೆಯಲ್ಲಿ ಮೃತಪಟ್ಟಿದ್ದರು.
ನಟನ ಸಾವು ಸಾವಿರಾರು ಅಭಿಮಾನಿಗಳಲ್ಲಿ ಆಘಾತ ಉಂಟು ಮಾಡಿತ್ತು. ಸಾಕಷ್ಟು ಊಹಾಪೋಹಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೇಲಿಬಂದಿದ್ದವು. ಕೆಲವರು ಸಂಚು ರೂಪಿಸಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿತ್ತು.
ಸುಶಾಂತ್ ಸಿಂಗ್ ಮೃತಪಟ್ಟ ನಂತರ ಅವರ ದೇಹವನ್ನು ತಂದಿದ್ದ ಕೂಪರ್ ಆಸ್ಪತ್ರೆಗೂ ಸಿಬಿಐ ತಂಡ ಭೇಟಿ ನೀಡಿ,ವೈದ್ಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿತು.ಕೇಂದ್ರ ವಿಧಿವಿಜ್ಞಾನ ಸಂಶೋಧನಾಲಯದ ತಂಡವೊಂದು ಡಿಜಿಟಲ್ ದಾಖಲೆಗಳನ್ನು ಪರಿಶೀಲಿಸಲಿದೆ ಎಂದು ಸಿಬಿಐ ಮಾಹಿತಿ ನೀಡಿದೆ.ಸುಶಾಂತ್ ಮರಣೋತ್ತರ ವರದಿಯನ್ನು ಏಮ್ಸ್ನ ನಾಲ್ವರು ತಜ್ಞರು ಪರಿಶೀಲಿಸಲಿದ್ದಾರೆ.
'ಸುಶಾಂತ್ ಕೊಲೆಯಾಗಿರಬಹುದೇಎಂಬ ಪ್ರಶ್ನೆಗೆ ಉತ್ತರ ಹುಡುಕುವುದು ನಮ್ಮ ಆದ್ಯತೆ' ಎಂದು ಫೊರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ಪ್ರತಿಕ್ರಿಯಿಸಿದ್ದಾರೆ.
ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಬೇಕು, ಮುಂಬೈ ಪೊಲೀಸರು ಎಲ್ಲ ಸಾಕ್ಷ್ಯಾಧಾರಗಳನ್ನು ಸಿಬಿಐಗೆ ಹಸ್ತಾಂತರಿಸಬೇಕು ಎಂದು ಸುಪ್ರೀಂಕೋರ್ಟ್ ಬುಧವಾರ ಆದೇಶ ನೀಡಿತ್ತು. ಶುಕ್ರವಾರದಿಂದ ಸಿಬಿಐ ತನಿಖೆ ಆರಂಭವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.