ಕೋಲ್ಕತ್ತ: ಜಾನುವಾರು ಕಳ್ಳಸಾಗಣೆ ಪ್ರಕರಣದಲ್ಲಿ ಉದ್ಯಮಿ ಬಿನಯ್ ಮಿಶ್ರಾ ಅವರ ಪೋಷಕರಿಗೆ ಸಿಬಿಐ ಸಮನ್ಸ್ ಜಾರಿ ಮಾಡಿದೆ. ಮಿಶ್ರಾ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷದ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದಾರೆ.
ಸಿಬಿಐನ ನಿಜಾಮ್ ಪ್ಯಾಲೆಸ್ ಕಚೇರಿಗೆ ಬುಧವಾರ ಹಾಜರಾಗಬೇಕು ಎಂದು ಪೋಷಕರಿಗೆ ಸೂಚಿಸಲಾಗಿದೆ. ಮಿಶ್ರಾ ಅವರ ವಿರುದ್ಧವೂ ವಾರಂಟ್ ಮತ್ತು ನೋಟಿಸ್ ಜಾರಿಯಾಗಿದ್ದರೂ ಅವರು ಇನ್ನೂ ಸಿಬಿಐಗೆ ಸಿಕ್ಕಿಬಿದ್ದಿಲ್ಲ.
ಮಿಶ್ರಾ ಅವರ ಕಚೇರಿಗಳು, ನಿವಾಸದ ಮೇಲೆ ಭ್ರಷ್ಟಾಚಾರ ನಿಗ್ರಹ ದಳ ಮತ್ತು ಸಿಬಿಐ ದಾಳಿ ನಡೆಸಿತ್ತು. ಈ ಮಧ್ಯೆ, ಜಾರಿ ನಿರ್ದೇಶನಾಲಯವು ಬಿನಯ್ ತಮ್ಮ ಬಿಕಾಶ್ ಮಿಶ್ರಾ ಅವರನ್ನು ಮಾರ್ಚ್ 16ರಂದು ಬಂಧಿಸಿತ್ತು. ಈ ಪ್ರಕರಣದಲ್ಲಿ ಅಕ್ರಮವಾಗಿ ಹಣ ವರ್ಗಾವಣೆಯಾಗಿರುವ ಆರೋಪ ಕುರಿತಂತೆ ಜಾರಿ ನಿರ್ದೇಶನಾಲಯವು ತನಿಖೆಯನ್ನು ಕೈಗೊಂಡಿದೆ.
ಹಗರಣದ ಪ್ರಮುಖ ಆರೋಪಿ ಎನಾಮುಲ್ ಹಕ್ ಎಂಬುವರನ್ನು ಸಿಬಿಐ ಕಳೆದ ನವೆಂಬರ್ನಲ್ಲಿ ಬಂಧಿಸಿತ್ತು. ಜಾನುವಾರು ಕಳ್ಳಸಾಗಣೆ ಚಟುವಟಿಕೆಗೆ ಬಿಎಸ್ಎಫ್, ಕಸ್ಟಮ್ಸ್ ಅಧಿಕಾರಿಗಳಿಗೆ ಲಂಚ ನೀಡಲಾಗುತ್ತಿತ್ತು ಎಂದೂ ಆರೋಪಿಸಲಾಗಿದೆ. ಹಕ್ ಮತ್ತು ಬಿಎಸ್ಎಫ್ ಅಧಿಕಾರಿಯೊಬ್ಬರ ವಿರುದ್ಧ ಸಿಬಿಐ ಕಳೆದ ಫೆಬ್ರುವರಿ 8ರಂದು ದೋಷಾರೋಪ ಪಟ್ಟಿ ದಾಖಲಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.