ADVERTISEMENT

ಅಧಿಕಾರಿ ಸೋಗಿನಲ್ಲಿ ವಂಚನೆ ಪ್ರಕರಣ: ಟಿಆರ್‌ಎಸ್‌ ನಾಯಕರಿಗೆ ಸಿಬಿಐ ಸಮನ್ಸ್‌

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2022, 8:50 IST
Last Updated 30 ನವೆಂಬರ್ 2022, 8:50 IST
   

ನವದೆಹಲಿ: ವ್ಯಕ್ತಿಯೊಬ್ಬ ಹಿರಿಯ ಐಪಿಎಸ್‌ ಅಧಿಕಾರಿ ಸೋಗಿನಲ್ಲಿಜನರನ್ನು ವಂಚಿಸಿ ಹಣ ತೆಗೆದುಕೊಳ್ಳುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಸಚಿವ ಗಂಗುಲ ಕಮಲಾಕರ ಮತ್ತು ರಾಜ್ಯಸಭಾ ಸಂಸದ ವಡ್ಡಿರಾಜು ರವಿಚಂದ್ರ ಅವರಿಗೆ ಸಿಬಿಐ ಸಮನ್ಸ್‌ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿ ಗುರುವಾರ ವಿಚಾರಣೆಗೆ ಹಾಜರಾಗುವಂತೆ ಟಿಆರ್‌ಎಸ್‌ ನಾಯಕರಿಗೆ ಸಿಬಿಐ ಸೂಚಿಸಿದೆ.


ತನ್ನನ್ನು ಸರ್ಕಾರದ ಜಂಟಿ ಕಾರ್ಯದರ್ಶಿ ಎಂದು ಬಿಂಬಿಸಿಕೊಂಡು ಜನರಿಂದ ದುಬಾರಿ ಉಡುಗೊರೆಗೆ ಬೇಡಿಕೆ ಇಡುತ್ತಿದ್ದ ವ್ಯಕ್ತಿಯೊಬ್ಬನನ್ನು ತಮಿಳುನಾಡು ಭವನದಲ್ಲಿ ಸೋಮವಾರ ಸಿಬಿಐ ಬಂಧಿಸಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.

ADVERTISEMENT


ವಿಶಾಖಪಟ್ಟಣದ ಕೋವಿ ರೆಡ್ಡಿ ಶ್ರೀನಿವಾಸ್‌ ರಾವ್‌ ಬಂಧಿತ ಆರೋಪಿ. ವಿವಿಧ ಕೇಂದ್ರ ತನಿಖಾ ಸಂಸ್ಥೆಗಳಲ್ಲಿ ದಾಖಲಾದ ಪ್ರಕರಣಗಳು ಸೇರಿದಂತೆ ಸರ್ಕಾರಿ ಕೆಲಸ ಮಾಡಿಸಿಕೊಡಲು ಜನಪ್ರತಿನಿಧಿಗಳ ಪರ ಕೆಲಸ ಮಾಡುತ್ತಿರುವುದಾಗಿ ಈತ ಭರವಸೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ನವೆಂಬರ್ 22 ರಂದು ಈತ ದೆಹಲಿಯಲ್ಲಿ ಆರು ಜನರನ್ನು ಭೇಟಿಯಾಗಿದ್ದಾನೆ. ಸರ್ಕಾರಿ ಅಧಿಕಾರಿಗಳಿಂದ ಬಾಕಿ ಇರುವ ಯಾವುದೇ ಕೆಲಸವನ್ನು ಬೇಕಿದ್ದರೂ ಮಾಡಿಸಿಕೊಡುವುದಾಗಿ ಹೇಳಿದ್ದಾನೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.