ಮುಂಬೈ: ಸುಪ್ರೀಂ ಕೋರ್ಟ್ ಆದೇಶದಂತೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆ ಆರಂಭಿಸಿರುವ ಸಿಬಿಐ ವಿಶೇಷ ತಂಡವು ಶನಿವಾರ ಮೃತ ನಟನ ನಿವಾಸಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ತನಿಖೆಗಾಗಿ ಸುಶಾಂತ್ನ ಸಿಬ್ಬಂದಿಯೊಬ್ಬರೊಂದಿಗೆಗೆಳೆಯ ಸಿದ್ಧಾರ್ಥ್ ಪಿಥಾನಿ ಅವರನ್ನು ಸುಶಾಂತ್ ಅವರ ಬಾಂದ್ರಾ ನಿವಾಸಕ್ಕೆ ಸಿಬಿಐ ಅಧಿಕಾರಿಗಳು ಕರೆತಂದಿದ್ದಾರೆ. ಸುಶಾಂತ್ ಸಾವಿನ ಪ್ರಕರಣದಲ್ಲಿ ಇವರಿಬ್ಬರೂ ಪ್ರಮುಖ ಸಾಕ್ಷ್ಯಗಳಾಗಿದ್ದಾರೆ.
ಜೂನ್ 14ರಂದು ಸುಶಾಂತ್ ನಿಧನರಾದ ದಿನ ನಡೆದಿದ್ದ ಘಟನಾವಳಿಗಳನ್ನು ಸಿಬಿಐನ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ಫೋಟೊ ಮತ್ತು ವಿಜ್ಞಾನ ವಿಭಾಗ ಮರುಸೃಷ್ಟಿಸಲಿದೆ.
ಸುಶಾಂತ್ ಅವರ ಗೆಳೆಯ ಮತ್ತು ಸುಶಾಂತ್ ಇದ್ದ ಫ್ಲಾಟ್ನಲ್ಲಿಯೇ ಇರುತ್ತಿದ್ದ ಸಿದ್ಧಾರ್ಥ್ ಪಿಥಾನಿ ಅವರನ್ನು ಕೆಲ ವರದಿಗಳಲ್ಲಿ ಸುಶಾಂತ್ ಅವರ ಕ್ರಿಯೇಟಿವ್ ಮ್ಯಾನೇಜರ್ ಎಂದು ಉಲ್ಲೇಖಿಸಲಾಗಿದೆ. ಅವರು ತಮ್ಮನ್ನು ತಾವು ನಟ ಮತ್ತು ಫಿಲ್ಮ್ ಮೇಕರ್ ಎಂದೂ ಕರೆದುಕೊಳ್ಳುತ್ತಾರೆ. ಸುಶಾಂತ್ ಸಾವಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈ ತಿಂಗಳ ಆರಂಭದಲ್ಲಿ ಪಿಥಾನಿ ಅವರ ವಿಚಾರಣೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸುಶಾಂತ್ ಮನೆಗೆ ಭೇಟಿ ನೀಡುವುದಕ್ಕೂ ಮುನ್ನ ಸಿಬಿಐ ಸುಶಾಂತ್ ಅವರ ಬಾಣಸಿಗನನ್ನು ವಿಚಾರಣೆಗೆ ಒಳಪಡಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಜನರನ್ನು ಸಿಬಿಐ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.