ಕಲ್ಚಿನಿ: ಮತದಾನ ನಡೆಯುತ್ತಿರುವ ಹಲವಾರು ಕ್ಷೇತ್ರಗಳಲ್ಲಿ ಮತದಾರರ ಮೇಲೆ ಕೇಂದ್ರದ ಪಡೆಗಳು ಹಲ್ಲೆ ಮಾಡಿದ್ದು, ಬಿಜೆಪಿಗೆ ಮತ ಚಲಾಯಿಸುವಂತೆ ಸೂಚನೆ ನೀಡಿವೆ. ಬಿಜೆಪಿ ಮತದಾನ ಕೇಂದ್ರಗಳನ್ನು ಬಲವಂತವಾಗಿ ಆಕ್ರಮಿಸಿ ಟಿಎಂಸಿ ಅಭ್ಯರ್ಥಿಗಳ ಮೇಲೆ ಹಲ್ಲೆ ನಡೆಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ.
ಅಲಿಪುರ್ದುರ್ ಜಿಲ್ಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಟಿಎಂಸಿ ಮುಖ್ಯಸ್ಥೆ, ಚುನಾವಣಾ ಆಯೋಗವು ಸಿಆರ್ಪಿಎಫ್, ಸಿಐಎಸ್ಎಫ್, ಬಿಎಸ್ಎಫ್ ಮತ್ತು ಐಟಿಬಿಪಿಯ 'ಮಿತಿಮೀರಿದ' ಕೆಲಸಗಳ ವಿಚಾರದಲ್ಲಿ ಕಣ್ಮುಚ್ಚಿ ಕುಳಿದಿದೆ. ಅವರು ಬೆಳಿಗ್ಗೆಯಿಂದ ಜನರನ್ನು ಹೊಡೆಯುತ್ತಿದ್ದಾರೆ ಮತ್ತು ಹಿಂಸಿಸುತ್ತಿದ್ದಾರೆ. ಅವರು 'ಬಿಜೆಪಿ ಕೊ ವೋಟ್ ದೊ' (ಬಿಜೆಪಿಗೆ ಮತ ನೀಡಿ) ಎಂದು ಹೇಳುತ್ತಿದ್ದಾರೆ' ಎಂದು ಆರೋಪಿಸಿದರು.
ಅರಂಬಾಗ್ನಲ್ಲಿರುವ ತನ್ನ ಪಕ್ಷದ ನಾಮಿನಿ ಸುಜಾತಾ ಮೊಂಡಾಲ್ ಅವರನ್ನು ಮತದಾನ ಕೇಂದ್ರದ ಬಳಿ ಕೇಸರಿ ಪಕ್ಷದ ಕಾರ್ಯಕರ್ತರು ಬೆನ್ನಟ್ಟಿ ತಲೆಗೆ ಹೊಡೆದಿದ್ದಾರೆ. ನಮ್ಮ ಪರಿಶಿಷ್ಟ ಜಾತಿ ಅಭ್ಯರ್ಥಿ ಸುಜಾತಾ ಅವರು ಬೂತ್ಗೆ ಭೇಟಿ ನೀಡಿದಾಗ ಬಿಜೆಪಿ ಬೆಂಬಲಿಗರು ಗಂಭೀರವಾಗಿ ಗಾಯಗೊಳಿಸಿದ್ದಾರೆ. ಅವರು ಖಾನಕುಲ್ನಲ್ಲಿ ಮತ್ತೊಬ್ಬ ಅಭ್ಯರ್ಥಿಗೆ ಹೊಡೆದಿದ್ದಾರೆ ಎಂದು ದೂರಿದರು.
'ಕ್ಯಾನಿಂಗ್ ಈಸ್ಟ್ನಲ್ಲಿ, ನಮ್ಮ ನಾಮಿನಿ ಶೌಕತ್ ಮೊಲ್ಲಾ ಅವರನ್ನು ಮತಗಟ್ಟೆಗೆ ಪ್ರವೇಶಿಸದಂತೆ ಭದ್ರತಾ ಪಡೆಗಳು ತಡೆದಿವೆ. ರಾಜ್ಯದಾದ್ಯಂತ ನಮ್ಮ ಅಭ್ಯರ್ಥಿಗಳು ಮತ್ತು ಕಾರ್ಯಕರ್ತರ ಮೇಲೆ ಇಂತಹ ಹಲವಾರು ದಾಳಿಗಳು ನಡೆದಿವೆ'. ದೌರ್ಜನ್ಯ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದ ಕನಿಷ್ಠ 100 ದೂರುಗಳು ಬಂದಿವೆ. ಈ ಕುರಿತಂತೆ ಚುನಾವಣೆ ಆಯೋಗಕ್ಕೆ ಸರಿಯಾದ ಮಾಹಿತಿ ನೀಡಲಾಗಿದೆ ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ.
ಮಮತಾ ಬ್ಯಾನರ್ಜಿ ಮಾಡಿರುವ ಆರೋಪಗಳನ್ನು ಅಲ್ಲಗಳೆದಿರುವ ಬಿಜೆಪಿಯು, ಈ ಆರೋಪಗಳು ಆಧಾರರಹಿತ ಮತ್ತು ಸತ್ಯದಿಂದ ದೂರಾದವುಗಳು ಎಂದು ಹೇಳಿದೆ.
ಕೇಂದ್ರ ಪಡೆಗಳಿಂದ ಏನಾದರೂ ಕಿರುಕುಳ ಎದುರಾದರೆ ಪೊಲೀಸ್ ದೂರು ದಾಖಲಿಸುವಂತೆ ಮಹಿಳಾ ಮತದಾರರನ್ನು ಬ್ಯಾನರ್ಜಿ ಕೇಳಿದರು. 'ಚುನಾವಣೆ ಪ್ರಾರಂಭವಾದಾಗಿನಿಂದ ಏಳೆಂಟು ಜನರನ್ನು, ಅವರಲ್ಲಿ ನಾಲ್ವರು ನಮ್ಮ ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ನೀವು (ಬಿಜೆಪಿ) ನಮ್ಮನ್ನು ಭಯಭೀತಗೊಳಿಸಲು ಸಾಧ್ಯವಿಲ್ಲ, ಇಂತಹ ಕೃತ್ಯಗಳಿಂದ ನಮ್ಮನ್ನು ಬೆದರಿಸಲಾಗದು' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.