ADVERTISEMENT

ಕೇರಳ: ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಗೆ ₹ 267 ಕೋಟಿ ಮಂಜೂರು

ಪಿಟಿಐ
Published 16 ಆಗಸ್ಟ್ 2021, 14:50 IST
Last Updated 16 ಆಗಸ್ಟ್ 2021, 14:50 IST
ವೈರಸ್‌
ವೈರಸ್‌   

ತಿರುವನಂತಪುರ: ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಗೆ ಕೇರಳಕ್ಕೆ ₹ 267.35 ಕೋಟಿ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಹೇಳಿದ್ದಾರೆ.

ಕೋವಿಡ್ -19 ಪರಿಸ್ಥಿತಿಯ ಪರಿಶೀಲನೆ ನಡೆಸಲು ಕೇಂದ್ರ ಆರೋಗ್ಯ ಸಚಿವರ ನೇತೃತ್ವದ ತಂಡ ಸೋಮವಾರ ಕೇರಳಕ್ಕೆ ಭೇಟಿ ನೀಡಿದ್ದು, ರಾಜ್ಯಕ್ಕೆ ಹೆಚ್ಚಿನ ಡೋಸ್ ಲಸಿಕೆಯನ್ನು ವಿತರಿಸುವ ಭರವಸೆ ನೀಡಿದೆ.

ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಅವರನ್ನು ಭೇಟಿ ಮಾಡಿ ಕೇಂದ್ರ ಸಚಿವರು ಚರ್ಚೆ ನಡೆಸಿದ್ದರು.

ADVERTISEMENT

ಈ ಸಂಬಂಧ ಟ್ವೀಟ್‌ ಮಾಡಿರುವ ಕೇಂದ್ರ ಸಚಿವರು, ‘ಕೋವಿಡ್ ನಿರ್ವಹಣೆಗೆ ₹ 267.35 ಕೋಟಿ ಪ್ಯಾಕೇಜ್‌ ಜೊತೆಗೆ ಕೇರಳದ ಪ್ರತಿ ಜಿಲ್ಲೆಯಲ್ಲಿ ಔಷಧ ದಾಸ್ತಾನು ಕೇಂದ್ರ ಪ್ರಾರಂಭಿಸಲು ಹೆಚ್ಚುವರಿಯಾಗಿ ಒಂದು ಕೋಟಿ ರೂಪಾಯಿ ನೀಡಲಾಗುವುದು. ಕೇರಳಕ್ಕೆ ಸಾಧ್ಯವಿರುವ ಎಲ್ಲ ಬಗೆಯ ಸಹಾಯ ಮಾಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.

ಮಕ್ಕಳ ಆರೋಗ್ಯಕ್ಕಾಗಿ, ಜಿಲ್ಲಾ ಆಸ್ಪತ್ರೆಗಳಲ್ಲಿ 10 ಕಿಲೋ ಲೀಟರ್ ದ್ರವ ಆಮ್ಲಜನಕ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಸೌಲಭ್ಯದೊಂದಿಗೆ ಮಕ್ಕಳ ಐಸಿಯು ಸ್ಥಾಪಿಸಲಾಗುವುದು ಎಂದು ಹೇಳಿದ್ದಾರೆ.

ಕೋವಿಡ್‌ ನಿರ್ವಹಣೆಗೆ ಶ್ಲಾಘನೆ:ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳನ್ನು ಸಚಿವರು ಶ್ಲಾಘಿಸಿದ್ದು,ಲಸಿಕೆ ಪೋಲು ಮಾಡದಿರುವ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.