ADVERTISEMENT

ಕೇರಳ‌ ಲಾಕ್‌ಡೌನ್ ಸಡಿಲಿಕೆಯು ನಿಯಮಕ್ಕೆ ವಿರುದ್ಧ: ಕೇಂದ್ರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2020, 7:06 IST
Last Updated 20 ಏಪ್ರಿಲ್ 2020, 7:06 IST
ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೊಚ್ಚಿಯ ಮೊಬೈಲ್ ಅಂಗಡಿ ಮುಂದೆ ಸಾಲಾಗಿ ನಿಂತ ಗ್ರಾಹಕರು
ದೇಶದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿದ್ದರೂ ಕೊಚ್ಚಿಯ ಮೊಬೈಲ್ ಅಂಗಡಿ ಮುಂದೆ ಸಾಲಾಗಿ ನಿಂತ ಗ್ರಾಹಕರು   

ನವದೆಹಲಿ: ರೆಸ್ಟೋರೆಂಟ್‌ಗಳನ್ನು ತೆರೆಯಲು, ನಗರಗಳಲ್ಲಿ ಬಸ್ ಪ್ರಯಾಣ ಮತ್ತು ಪುರಸಭೆ ವ್ಯಾಪ್ತಿಯ ಪ್ರದೇಶಗಳಲ್ಲಿ ಎಂಎಸ್‌ಎಂಇ ಕೈಗಾರಿಕೆಗಳನ್ನು ತೆರೆಯಲು ಅನುಮತಿ ನೀಡುವ ಕೇರಳ ಸರ್ಕಾರದ ನಿರ್ಧಾರಕ್ಕೆ ಕೇಂದ್ರ ಗೃಹ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಲಾಕ್‌ಡೌನ್ ಮಾರ್ಗಸೂಚಿಗಳಿಗೆ ವಿರುದ್ಧವಾದದ್ದು ಎಂದು ಗೃಹ ಇಲಾಖೆ ಹೇಳಿದೆ ಎಂದು ಹೇಳಿದೆ.

ಈ ಕುರಿತು ಕೇರಳ ಸರ್ಕಾರಕ್ಕೆ ಪತ್ರ ಬರೆದಿರುವ ಗೃಹ ಸಚಿವಾಲಯವು, ಏಪ್ರಿಲ್ 17 ರಂದು ರಾಜ್ಯ ಸರ್ಕಾರವು ಲಾಕ್‌ಡೌನ್ ಸಡಿಲಿಕೆ ಮಾಡಿ ಪರಿಷ್ಕೃತ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಏಪ್ರಿಲ್ 15 ರಂದು ಕೇಂದ್ರ ಸರ್ಕಾರ ಹೊರಡಿಸಿದ್ದಮಾರ್ಗಸೂಚಿಗಳಲ್ಲಿ ನಿಷೇಧಿಸಲಾಗಿದ್ದ ಚಟುವಟಿಕೆಗಳಿಗೆ ಅವಕಾಶ ಮಾಡಿಕೊಟ್ಟಿದೆ ಎಂದಿದೆ.

ಕೇರಳ ಸರ್ಕಾರವು ಅನುಮತಿ ನೀಡಿರುವ ಹೆಚ್ಚುವರಿ ಚಟುವಟಿಕೆಗಳಲ್ಲಿ ಸ್ಥಳೀಯ ಕಾರ್ಯಾಗಾರಗಳು, ಕ್ಷೌರದ ಅಂಗಡಿಗಳು, ರೆಸ್ಟೋರೆಂಟ್‌ಗಳು, ಪುಸ್ತಕ ಮಳಿಗೆಗಳು, ಪುರಸಭೆ ವ್ಯಾಪ್ತಿಯಲ್ಲಿನ ಕಿರು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳು, ಕಡಿಮೆ ಅಂತರದ ನಗರಗಳು ಮತ್ತು ಪಟ್ಟಣಗಳಲ್ಲಿ ಬಸ್ ಪ್ರಯಾಣ, ನಾಲ್ಕು ಚಕ್ರದ ವಾಹನಗಳ ಹಿಂಬದಿ ಸೀಟಿನಲ್ಲಿ ಇಬ್ಬರು ಪ್ರಯಾಣಿಕರಿಗೆ ಮತ್ತು ಸ್ಕೂಟರ್‌ಗಳಲ್ಲಿ ಹಿಂಬದಿ ಸವಾರರಿಗೆ ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಇದು ಗೃಹ ಸಚಿವಾಲಯವು ಹೊರಡಿಸಿರುವ ಮಾರ್ಗಸೂಚಿಗಳನ್ನು ದುರ್ಬಲಗೊಳಿಸುತ್ತದೆ ಮತ್ತು 2005ರ ವಿಪತ್ತು ನಿರ್ವಹಣಾ ಕಾಯ್ದೆ ಅಡಿಯಲ್ಲಿ ಏಪ್ರಿಲ್ 15ರಂದು ಹೊರಡಿಸಲಾಗಿರುವ ಆದೇಶವನ್ನು ಉಲ್ಲಂಘಿಸುತ್ತದೆ ಎಂದು ಗೃಹ ಸಚಿವಾಲಯ ತಿಳಿಸಿದೆ.

ಕೇರಳ ಸರ್ಕಾರವು ಎರಡು ವಲಯಗಳಲ್ಲಿ ಕೋವಿಡ್-19 ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸುವುದಾಗಿ ಘೋಷಿಸಿದ್ದು, ಇವುಗಳಲ್ಲಿ ಖಾಸಗಿ ವಾಹನಗಳು ಬೆಸ-ಸಮ ಆಧಾರದಲ್ಲಿ ಚಲಿಸಲು ಮತ್ತು ಸೋಮವಾರದಿಂದ ಹೋಟೆಲ್‌ಗಳಲ್ಲಿ ಊಟದ ಸೇವೆಗೆ ಅವಕಾಶ ಮಾಡಿಕೊಟ್ಟಿದೆ.

ಕೇರಳದಲ್ಲಿ ಭಾನುವಾರ ಎರಡು ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 401ಕ್ಕೆ ಏರಿಕೆಯಾಗಿದೆ. ಇವರಲ್ಲಿ 13 ಜನರು ಗುಣಮುಖರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.