ನವದೆಹಲಿ: ‘ಭಾರತದಲ್ಲಿ ವ್ಯವಹಾರ ಮಾಡಲು ಸುಲಭವಾಗುವ ನಿಟ್ಟಿನಲ್ಲಿ ಹಿಂದಿನ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ದೇಶದ ಆರ್ಥಿಕ ಪ್ರಗತಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಕೆಲಸ ಮಾಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿಳಿಸಿದರು.
ನೀತಿ ಆಯೋಗದ ಆರನೇ ಆಡಳಿತ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ‘ಆತ್ಮನಿರ್ಭರ ಭಾರತ’ ಯೋಜನೆಯ ಭಾಗವಾಗಲು ಖಾಸಗಿ ವಲಯಕ್ಕೂ ಸಂಪೂರ್ಣ ಅವಕಾಶ ಸಿಗಬೇಕು. ಇದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜತೆಯಾಗಿ ಕೆಲಸ ಮಾಡಬೇಕು. ಸರ್ಕಾರ, ಆರ್ಥಿಕ ಪ್ರಗತಿಗಾಗಿ ಖಾಸಗಿ ವಲಯಕ್ಕೆ ಗೌರವ ಮತ್ತು ಸರಿಯಾದ ಪ್ರಾತಿನಿಧ್ಯ ನೀಡಬೇಕು ಎಂದರು.
‘ಕೃಷಿ ವಿಭಾಗವು ಖಾದ್ಯ ತೈಲಗಳಂತಹ ಉತ್ಪನ್ನಗಳನ್ನು ಹೆಚ್ಚು ಉತ್ಪಾದಿಸಬೇಕು. ಈ ಮೂಲಕ ಆಮದನ್ನು ಕಡಿಮೆಗೊಳಿಸಬೇಕು. ರೈತರಿಗೆ ಮಾರ್ಗದರ್ಶನ ನೀಡುವ ಮೂಲಕ ಇದನ್ನು ನಾವು ಸಾಧಿಸಬಹುದು. ಆಮದಿಗಾಗಿ ಖರ್ಚು ಮಾಡುವ ಹಣ, ರೈತರ ಖಾತೆಗಳಿಗೆ ಬರುವಂತೆ ಆಗಬೇಕು’ ಎಂದು ಅವರು ಹೇಳಿದರು.
‘ಸರ್ಕಾರದ ನೀತಿಗಳು ರೈತರ ಹೊರೆಯನ್ನು ಕಡಿಮೆ ಮಾಡಲಿವೆ. ಈ ನೀತಿಗಳು ರೈತರಿಗೆ ಉತ್ಪಾದಕತೆಯನ್ನು ಹೆಚ್ಚಿಸಲು ಮತ್ತು ಆಮದು ಕಡಿತಗೊಳಿಸಲು ಸಹಾಯ ಮಾಡುತ್ತದೆ. ಈ ಸುಧಾರಣೆಗಳು ರೈತರಿಗೆ ಹಣಕಾಸು ಮತ್ತು ತಂತ್ರಜ್ಞಾನದ ನೆರವನ್ನು ನೀಡಲಿದೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.