ADVERTISEMENT

ತಿರುಪತಿ ಲಡ್ಡು‌ ವಿವಾದ: ಪ್ರಾಣಿಗಳ ಕೊಬ್ಬು ದೃಢ; ಚಂದ್ರಬಾಬು ನಾಯ್ಡು

ಪಿಟಿಐ
Published 1 ಫೆಬ್ರುವರಿ 2026, 14:29 IST
Last Updated 1 ಫೆಬ್ರುವರಿ 2026, 14:29 IST
ತಿರುಪತಿ
ತಿರುಪತಿ   

ಕುಪ್ಪಂ (ಆಂಧ್ರ ಪ್ರದೇಶ): ‘ವೈಎಸ್‌ಆರ್‌ಸಿಪಿ ಆಡಳಿತಾವಧಿಯಲ್ಲಿ ತಿರುಪತಿ ತಿರುಮಲ ದೇವಸ್ಥಾನಕ್ಕೆ (ಟಿಟಿಡಿ) ಸರಬರಾಜು ಮಾಡಲಾದ ತುಪ್ಪದಲ್ಲಿ ಪ್ರಾಣಿಗಳ ಕೊಬ್ಬಿನ ಅಂಶವಿದೆ ಎಂದು ಎನ್‌ಡಿಡಿಬಿ–ಸಿಎಎಲ್‌ಎಫ್‌ ಪ್ರಯೋಗಾಲಯದಿಂದ ವರದಿ ಬಂದ ನಂತರವೇ ಮಾತನಾಡಿದ್ದೇನೆ’ ಎಂದು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭಾನುವಾರ ಹೇಳಿದ್ದಾರೆ.

ಇಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು, ದೇವಾಲಯವನ್ನು ಅನಗತ್ಯವಾಗಿ ವಿವಾದಗಳಿಗೆ ಎಳೆಯಲಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದರು.

‘ಶುದ್ಧೀಕರಣದ ಭಾಗವಾಗಿ ಆಗಿನ ಕಾರ್ಯನಿರ್ವಾಹಕ ಅಧಿಕಾರಿ ಶ್ಯಾಮಲಾ ರಾವ್ ಅವರು ಎನ್‌ಡಿಡಿಬಿಯಿಂದ ತುಪ್ಪದ ಮಾದರಿಗಳು ಬೇಕೆಂದು ಕೇಳಿದರು. ಅದು ವರದಿಯನ್ನು ನೀಡಿತು. ಆ ವರದಿಯನ್ನು ಆಧರಿಸಿ, ನಾನು ಅದರಲ್ಲಿ ಪ್ರಾಣಿಗಳ ಕೊಬ್ಬಿನ ಕಲಬೆರಕೆ ಇದೆ ಎಂದು ಹೇಳಿದೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯದ ಆಡಳಿತಾಧಿಕಾರಿಯಾಗಿ ತುಪ್ಪದ ಕಲಬೆರಕೆಯನ್ನು ಪರಿಶೀಲಿಸಲು ವಿಶೇಷ ತನಿಖಾ ತಂಡವನ್ನು ನೇಮಿಸಿದ್ದೇನೆ. ಆದರೆ, ವೈಎಸ್‌ಆರ್‌ಸಿಪಿ ನನ್ನ ವ್ಯಕ್ತಿತ್ವಹರಣ ಮಾಡುತ್ತಿದ್ದು, ನಾನು ಕ್ಷಮೆ ಯಾಚಿಸುವಂತೆ ಕೇಳುತ್ತಿದೆ’ ಎಂದು ಆರೋಪಿಸಿದರು.

ತುಪ್ಪ ಕಲಬೆರಕೆ ಪ್ರಕರಣದ ಅಂತಿಮ ಆರೋಪ ಪಟ್ಟಿಯನ್ನು ಇತ್ತೀಚೆಗೆ ಎಸ್‌ಐಟಿ ಎಸಿಬಿ ನ್ಯಾಯಾಲಯದಲ್ಲಿ ಸಲ್ಲಿಸಿದೆ. ಪ್ರಕರಣದಲ್ಲಿ ಒಂಬತ್ತು ಟಿಟಿಡಿ ಅಧಿಕಾರಿಗಳು, ಐವರು ಡೇರಿ ತಜ್ಞರು ಸೇರಿದಂತೆ ಒಟ್ಟು 36 ಜನರನ್ನು ಆರೋಪಿಗಳೆಂದು ಅದು ಹೆಸರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.