ಕೇದಾರನಾಥ ದೇಗುಲ
ಪಿಟಿಐ ಚಿತ್ರ
ಡೆಹರಾಡೂನ್: ಚಾರ್ಧಾಮ್ ಯಾತ್ರೆ ಆರಂಭವಾಗುವ ಮೊದಲೇ ಭಕ್ತರ ನೋಂದಣಿ ಸಂಖ್ಯೆ 17 ಲಕ್ಷ ತಲುಪಿದ್ದು, ಉತ್ತರಾಖಂಡ ಸರ್ಕಾರ ಸೋಮವಾರ ಆನ್ಲೈನ್ ನೋಂದಣಿ ಮಿತಿಯನ್ನು ಶೇ 75 ಕ್ಕೆ ಹೆಚ್ಚಿಸಲು ನಿರ್ಧರಿಸಿದೆ.
ಪ್ರತಿ ಧಾಮದ ಯಾತ್ರೆ ಮಾರ್ಗದಲ್ಲಿ ಹೆಚ್ಚಿನ ನೋಂದಣಿ ಕೌಂಟರ್ಗಳನ್ನು ತೆರೆಯಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಉತ್ತರಕಾಶಿ, ರುದ್ರಪ್ರಯಾಗ ಮತ್ತು ಚಮೋಲಿಯಲ್ಲಿನ ಹೋಟೆಲ್ ಮಾಲೀಕರೊಂದಿಗೆ ಯಾತ್ರೆಯ ಸಿದ್ಧತೆಗಳ ಕುರಿತು ಕಮಿಷನರ್ ವಿನಯ್ ಶಂಕರ್ ಪಾಂಡೆ ಸಭೆ ನಡೆಸಿದ್ದಾರೆ.
ಈ ವರ್ಷ ಉತ್ತರಕಾಶಿಯಲ್ಲಿನ ಗಂಗೋತ್ರಿ ಮತ್ತು ಯಮುನೋತ್ರಿಯ ಬಾಗಿಲುಗಳು ಅಕ್ಷಯ ತೃತೀಯವಾದ ಏ.30ರಂದು ತೆರೆಯುವ ಮೂಲಕ ಚಾರ್ಧಾಮ್ ಯಾತ್ರೆ ಆರಂಭವಾಗಲಿದೆ.
ಮೇ.2 ರಂದು ಕೇದಾರನಾಥ ಮತ್ತು ಮೇ 4ರಂದು ಬದರಿನಾಥ ದೇಗುಲಗಳು ಬಾಗಿಲುಗಳು ತೆರೆಯಲಿವೆ.
ಮಾರ್ಚ್ 20ರಂದು ಸರ್ಕಾರ ನೋಂದಣಿ ಪ್ರಕ್ರಿಯೆ ಆರಂಭಿಸಿತ್ತು. ಅಂದಿನಿಂದ 17 ಲಕ್ಷ ನೋಂದಣಿಯಾಗಿದೆ. ಅದರಲ್ಲಿ ಕೇದಾರನಾಥಕ್ಕೆ ಅತಿ ಹೆಚ್ಚು 6 ಲಕ್ಷಕ್ಕೂ ಹೆಚ್ಚು ಭಕ್ತರು ನೋಂದಾಯಿಸಿಕೊಂಡಿದ್ದಾರೆ, ಯಮುನೋತ್ರಿಗೆ 3 ಲಕ್ಷ ಮತ್ತು ಗಂಗೋತ್ರಿ, ಬದರಿನಾಥಕ್ಕೆ 5 ಲಕ್ಷ ನೋಂದಣಿಯಾಗಿದೆ. ಆಫ್ಲೈನ್ ನೋಂದಣಿ ಏ.25ರಿಂದ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.