ADVERTISEMENT

ಅರವಿಂದ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಚನ್ನಿ ನಿರ್ಧಾರ

ಪಿಟಿಐ
Published 21 ಜನವರಿ 2022, 11:24 IST
Last Updated 21 ಜನವರಿ 2022, 11:24 IST
ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್   

ಚಂಡೀಗಡ: ಮರಳು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸೋದರಳಿಯನಿಗೆ ಸೇರಿದ ಆಸ್ತಿ ಮೇಲೆ ಜಾರಿ ನಿರ್ದೇಶನಾಲಯ(ಇ.ಡಿ.) ದಾಳಿ ನಡೆಸಿದೆ. ಹೀಗಾಗಿ ಚನ್ನಿ ಅವರನ್ನು ಅಪ್ರಾಮಾಣಿಕ ವ್ಯಕ್ತಿ ಎಂದು ಕರೆದಿರುವ ಎಎಪಿ ನಾಯಕ ಅರವಿಂದ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ಚರಣ್‌ಜಿತ್‌ ಸಿಂಗ್‌ ಚನ್ನಿ ಶುಕ್ರವಾರ ತಿಳಿಸಿದ್ದಾರೆ.

'ಕೇಜ್ರಿವಾಲ್ ಅವರು ಇತರರ ಹೆಸರು ಕೆಡಿಸಲು ಆರೋಪಗಳನ್ನು ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ ಮತ್ತು ಈ ಹಿಂದೆ ಅವರು ಬಿಜೆಪಿ ನಾಯಕರಾದ ನಿತಿನ್ ಗಡ್ಕರಿ, ದಿ. ಅರುಣ್ ಜೇಟ್ಲಿ ಮತ್ತು ಎಸ್‌ಎಡಿ ನಾಯಕ ಬಿಕ್ರಮ್ ಸಿಂಗ್ ಮಜಿಥಿಯಾ ಅವರ ಬಳಿ ಹೇಗೆ ಕ್ಷಮೆಯಾಚಿಸಿದರು ಎಂಬುದನ್ನು ಕಂಡಿದ್ದೇವೆ' ಎಂದು ಚನ್ನಿ ಆರೋಪಿಸಿದರು.

ತಮ್ಮ ಸ್ವಕ್ಷೇತ್ರ ಚಮ್ಕೌರ್ ಸಾಹಿಬ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಅದಕ್ಕೆ ಅನುಮತಿ ನೀಡುವಂತೆ ನನ್ನ ಪಕ್ಷಕ್ಕೆ ಮನವಿ ಮಾಡಿದ್ದೇನೆ. ಅವರು ನನ್ನನ್ನು ಅಪ್ರಾಮಾಣಿಕ ಎಂದು ಬಿಂಬಿಸುತ್ತಿದ್ದಾರೆ ಮತ್ತು ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ' ಎಂದು ತಿಳಿಸಿದರು.

ADVERTISEMENT

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರ ಸಂಬಂಧಿಗೆ ಸೇರಿದ ಆಸ್ತಿ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ ದಾಳಿಯ ಕಾರಣ, ಪಂಜಾಬ್‌ನ ಕಾಂಗ್ರೆಸ್ ಸರ್ಕಾರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ವಿಪಕ್ಷಗಳು ಚನ್ನಿ ಅವರ ರಾಜೀನಾಮೆಗೆ ಆಗ್ರಹಿಸಿವೆ.

'ಅವರು ನನ್ನನ್ನು ಅಪ್ರಾಮಾಣಿಕ ಎಂದು ಕರೆಯುತ್ತಿದ್ದಾರೆ... ಒಂದು ವೇಳೆ ಅವರ ಸೋದರಳಿಯನೇ ಸಿಕ್ಕಿಬಿದ್ದಾಗ ಅವನು ತನ್ನನ್ನು ತಾನೇ ಅಪ್ರಾಮಾಣಿಕ ಎಂದು ಕರೆದುಕೊಳ್ಳುವರೇ' ಎಂದು ಚನ್ನಿ ಪ್ರಶ್ನಿಸಿದ್ದಾರೆ.

'ಸಾಮಾಜಿಕ ಜಾಲತಾಣಗಳಲ್ಲಿ ನೋಟುಗಳ ಕಟ್ಟುಗಳೊಂದಿಗೆ ನನ್ನ ಫೋಟೊವನ್ನು ಏಕೆ ಸೇರಿಸಿದ್ದೀರಿ. ಇದರಲ್ಲಿ ನನಗೆ ಸೇರಿದ ಹಣ ಯಾವುದು, ಇದರಲ್ಲಿ ನನ್ನ ತಪ್ಪೇನು?. ನನ್ನನ್ನು ಯಾಕೆ ಇದರಲ್ಲಿ ಎಳೆದುತರುತ್ತಿದ್ದೀರಿ? ಬೇರೆಯವರ ಹಣವನ್ನು ವಶಪಡಿಸಿಕೊಳ್ಳಲಾಗಿದೆ... ಪಂಜಾಬ್‌ನ ಹತ್ತು ಸ್ಥಳಗಳಲ್ಲಿ ದಾಳಿ ನಡೆದಿದೆ. ನೀವು ನನ್ನನ್ನು ಯಾಕೆ ಇದರೊಂದಿಗೆ ಲಿಂಕ್ ಮಾಡುತ್ತಿದ್ದೀರಿ. ನನ್ನಿಂದ ಹಣವನ್ನು ವಶಪಡಿಸಿಕೊಂಡಿದ್ದರೆ, ಇ.ಡಿ. ನನ್ನ ಮನೆಯ ಮೇಲೆ ದಾಳಿ ನಡೆಸುತ್ತಿತ್ತು, ನನ್ನನ್ನು ಬಂಧಿಸಿ, ನನ್ನನ್ನು ಪ್ರಶ್ನಿಸುತ್ತಿತ್ತು' ಎಂದು ಚನ್ನಿ ಪ್ರತಿಪಕ್ಷಗಳು ಮಾಡಿದ ಆರೋಪಗಳಿಗೆ ಸಂಬಂಧಿಸಿದಂತೆ ತಮ್ಮ ನಿಲುವನ್ನು ಸ್ಪಷ್ಟಪಡಿಸಲು ಪ್ರಯತ್ನಿಸಿದ್ದಾರೆ.

ಚನ್ನಿ ಅವರ ಸೋದರಳಿಯನ ಮನೆ ಸೇರಿದಂತೆ ಹಲವೆಡೆ ಇ.ಡಿ ದಾಳಿ ನಡೆಸಿದಾಗಿನಿಂದ ಆಮ್ ಆದ್ಮಿ ಪಕ್ಷ ಚನ್ನಿ ಮೇಲೆ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದೆ. ಚನ್ನಿ ಸಾಮಾನ್ಯ ವ್ಯಕ್ತಿಯಲ್ಲ ಆದರೆ 'ಅಪ್ರಾಮಾಣಿಕ' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.