ADVERTISEMENT

ಸಾಕ್ಷ್ಯ ತಿರುಚಿದ ಪ್ರಕರಣ: ತೀಸ್ತಾ ಸೇರಿ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2022, 15:37 IST
Last Updated 21 ಸೆಪ್ಟೆಂಬರ್ 2022, 15:37 IST
ತೀಸ್ತಾ
ತೀಸ್ತಾ   

ಅಹಮದಾಬಾದ್:2002ರ ಗುಜರಾತ್‌ ಗಲಭೆಗೆ ಸಂಬಂಧಿಸಿದಂತೆ ನಕಲಿ ಸಾಕ್ಷ್ಯಾಧಾರ ಸೃಷ್ಟಿಸಿದ ಪ್ರಕರಣದಲ್ಲಿ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌, ನಿವೃತ್ತ ಡಿಜಿಪಿ ಆರ್‌.ಪಿ.ಶ್ರೀಕುಮಾರ್‌ ಮತ್ತು ಮಾಜಿ ಐಪಿಎಸ್‌ ಅಧಿಕಾರಿ ಸಂಜೀವ್‌ ಭಟ್‌ ವಿರುದ್ಧ ವಿಶೇಷ ತನಿಖಾ ತಂಡ ಬುಧವಾರ ಚಾರ್ಜ್‌ಶೀಟ್‌ ಸಲ್ಲಿಸಿದೆ.

ಹಿಂಸಾಚಾರದ ಹಿಂದೆ ದೊಡ್ಡ ಪಿತೂರಿ ನಡೆದಿದೆ ಎಂದು ಆರೋಪಿಸಿ ಜಾಕಿಯಾ ಜಾಫ್ರಿ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಇತರೆ 63 ಜನರಿಗೆ ನೀಡಿದ್ದಸ ಕ್ಲೀನ್ ಚಿಟ್ ಅನ್ನು ಜೂನ್‌ನಲ್ಲಿ ಸುಪ್ರೀಂ ಕೋರ್ಟ್ ಎತ್ತಿಹಿಡಿದ ನಂತರ ಅಹಮದಾಬಾದ್ ಅಪರಾಧ ವಿಭಾಗ ಪ್ರಕರಣ ದಾಖಲಿಸಿದೆ.

ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಎಂ.ವಿ. ಚೌಹಾಣ್ ಅವರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲಾಗಿದೆ ಎಂದುತನಿಖಾಧಿಕಾರಿ ಮತ್ತು ವಿಶೇಷ ಕಾರ್ಯಾಚರಣೆ ವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಬಿ.ವಿ. ಸೋಲಂಕಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

6,300 ಪುಟಗಳ ಚಾರ್ಜ್‌ಶೀಟ್‌ನಲ್ಲಿ 90 ಸಾಕ್ಷ್ಯಗಳನ್ನು ಉಲ್ಲೇಖಿಸಲಾಗಿದೆ. ಪ್ರಮುಖವಾಗಿ ಐಪಿಎಸ್ ಅಧಿಕಾರಿ ನಂತರ ವಕೀಲರಾದ ರಾಹುಲ್‌ ಶರ್ಮಾ, ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಎಂ.ಪಿ.ಶಕ್ತಿಸಿಂಗ್‌ ಗೋಹಿಲ್ ಇದ್ದಾರೆ.ಹಿಂದಿನ ಗುಜರಾತ್‌ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಸಾಕ್ಷ್ಯಗಳ ಹೇಳಿಕೆಗಳನ್ನು ಪಡೆಯಲಾಗಿದೆ ಹಾಗೂ ವಿವಿಧ ನ್ಯಾಯಾಲಯ ಮತ್ತು ಆಯೋಗಕ್ಕೆಮೂವರು ಆರೋಪಿಗಳು ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಸೋಲಂಕಿ ತಿಳಿಸಿದರು.

ಚಾರ್ಜ್‌ಶೀಟ್‌ನಲ್ಲಿ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನ ಸಂಬಂಧಿತ ತೀರ್ಪುಗಳು ಮತ್ತು ಜಾಕಿಯಾ ಜಾಫ್ರಿ ಅವರು ವಿವಿಧ ನ್ಯಾಯಾಲಯಗಳಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಉಲ್ಲೇಖಿಸಲಾಗಿದೆ.

ಪ್ರಕರಣದ ವಿಚಾರಣೆ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಲಿದೆ. ಜೂನ್ 26 ರಂದು ಬಂಧನಕ್ಕೊಳಗಾಗಿದ್ದ ಸೆಟಲ್ವಾಡ್ ಅವರನ್ನು ಸೆ. 2 ರಂದು ಸುಪ್ರೀಂ ಕೋರ್ಟ್‌ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.ಜೂನ್ 26 ರಂದು ಬಂಧನಕ್ಕೊಳಗಾಗಿದ್ದ ಶ್ರೀಕುಮಾರ್ ಜೈಲಿನಲ್ಲಿದ್ದು, ಮೂರನೇ ಆರೋಪಿ ಭಟ್ ಪಾಲನಪುರ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.