ನವದೆಹಲಿ: ಛತ್ತೀಸಗಡ ವಿಧಾನಸಭೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಯನ್ನುಕೋವಿಡ್ ಸಾಂಕ್ರಾಮಿಕವು ಉಲ್ಬಣಗೊಂಡಿರುವ ಕಾರಣ ಸ್ಥಗಿತಗೊಳಿಸಿರುವುದಾಗಿ ಮುಖ್ಯಮಂತ್ರಿ ಭೂಪೇಶ್ ಬಘೆಲ್ಗುರುವಾರ ಪ್ರಕಟಿಸಿದ್ದಾರೆ. ಕೇಂದ್ರವು ಸೆಂಟ್ರಲ್ ವಿಸ್ತಾ ಯೋಜನೆಯನ್ನು ಸ್ಥಗಿತಗೊಳಿಸಬೇಕು ಎಂಬ ಬೇಡಿಕೆಯನ್ನು ಪುನರುಚ್ಚರಿಸಲು ಕಾಂಗ್ರೆಸ್ ಪಕ್ಷಕ್ಕೆ ಈ ನಿರ್ಧಾರವು ಅವಕಾಶ ಮಾಡಿಕೊಟ್ಟಿದೆ.
‘ಜನರೇ ನಮ್ಮ ಆದ್ಯತೆ.ವಿಧಾನಸಭೆ, ರಾಜಭವನ, ಮುಖ್ಯಮಂತ್ರಿ ನಿವಾಸ, ಸಚಿವರ ಅಧಿಕೃತ ನಿವಾಸಗಳ ನಿರ್ಮಾಣಕ್ಕೆ ಕೋವಿಡ್-19 ಪಿಡುಗು ಉಲ್ಬಣಗೊಳ್ಳುವ ಮೊದಲೇ ಶಿಲಾನ್ಯಾಸ ಮಾಡಲಾಗಿತ್ತು. ಈ ಎಲ್ಲ ನಿವೇಶನಗಳಲ್ಲಿಯೂ ಕೆಲಸ ನಿಲ್ಲಲಿದೆ’ ಎಂದು ಬಘೆಲ್ ಹೇಳಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನೂತನ ವಿಧಾನಸಭೆ ಕಟ್ಟಡದ ಶಿಲಾನ್ಯಾಸವನ್ನು 2020ರ ಆ.30ರಂದು ನೆರವೇರಿಸಿದ್ದರು.
ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಬಘೆಲ್ ಅವರ ನಿರ್ಧಾರವನ್ನು ಉಲ್ಲೇಖಿಸಿ, ಪ್ರಧಾನಿ ನರೇಂದ್ರ ಮೋದಿ ಅವರೂ ಇದನ್ನು ಅನುಸರಿಸಬೇಕು. ಸೆಂಟ್ರಲ್ ವಿಸ್ತಾ ಕಾಮಗಾರಿಯನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
‘ಪ್ರಧಾನಿ ನರೇಂದ್ರ ಮೋದಿ ಅವರೇ, ಪ್ರಜಾಪ್ರಭುತ್ವದಲ್ಲಿ ಸಂವೇದನಾಶೀಲ ಮತ್ತು ಜವ್ದಾರಿಯುತ ಸರ್ಕಾರವು ಕೆಲಸ ಮಾಡುವುದು ಹೀಗೆ. ಛತ್ತೀಸಗಡ ಸರ್ಕಾರಕ್ಕೆ ಎಲ್ಲಕ್ಕಿಂತಲೂ ಜನರ ಜೀವವೇ ಮುಖ್ಯ. ಕೋವಿಡ್ ತಡೆಯ ಪ್ರಯತ್ನಗಳನ್ನು ದುಪ್ಪಟ್ಟುಗೊಳಿಸಲಾಗಿದೆ. ನೀವು ಕಲಿಯುವುದು ಮತ್ತು ಸೆಂಟ್ರಲ್ ವಿಸ್ತಾದಂತಹ ಹುಚ್ಚಾಟ ನಿಲ್ಲಿಸುವುದು ಯಾವಾಗ’ ಎಂದು ರಮೇಶ್ ಪ್ರಶ್ನಿಸಿದ್ದಾರೆ.
ಸೆಂಟ್ರಲ್ ವಿಸ್ತಾ ಕಾಮಗಾರಿ ತಡೆಗೆ ಕಾಂಗ್ರೆಸ್ ಪಕ್ಷದ ಒತ್ತಡ ಹೆಚ್ಚಾಗುತ್ತಿದ್ದಂತೆಯೇ ಛತ್ತೀಸಗಡ ವಿಧಾನಸಭೆಯ ಹೊಸ ಕಟ್ಟಡ ಕಾಮಗಾರಿಯನ್ನು ಉಲ್ಲೇಖಿಸಿ ಬಿಜೆಪಿ ತಿರುಗೇಟು ನೀಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.