
ನಕ್ಸಲರು
ಜಗದಲ್ಪುರ: ಮಾವೋವಾದಿ ಸಂಘಟನೆಯ ಕೇಂದ್ರ ಸಮಿತಿಯ ಸದಸ್ಯ ಸೇರಿದಂತೆ ಒಟ್ಟು 210 ನಕ್ಸಲರು ಶುಕ್ರವಾರ ಇಲ್ಲಿಗೆ ಸಮೀಪದ ಜಗದಲ್ಪುರದಲ್ಲಿ ಪೊಲೀಸರು ಮತ್ತು ಅರೆಸೇನಾ ಪಡೆ ಎದುರು ಶರಣಾದರು.
ಶರಣಾದ ನಕ್ಸಲರಿಂದ, 19 ಎಕೆ –47 ರೈಫಲ್, 23 ಐಎನ್ಎಸ್ಎಸ್ ರೈಫಲ್, ಲೈಟ್ ಮಷೀನ್ ಗನ್, ಗ್ರೆನೇಡ್ ಲಾಂಚರ್ ಸೇರಿದಂತೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಒಪ್ಪಿಸಿದರು.
ಡಂಡಕಾರಣ್ಯ ವಿಶೇಷ ವಿಭಾಗೀಯ ಸಮಿತಿಯ (ಡಿಎಸ್ಜೆಡ್ಸಿ) ನಾಲ್ವರು ನಕ್ಸಲರು, ಈ ಸಮಿತಿಯ ಪ್ರಾಂತೀಯ ಸಮಿತಿಯ 21 ಸದಸ್ಯರು ಹಾಗೂ 61 ಮಂದಿ ಪ್ರದೇಶ ಸಮಿತಿ ಸದಸ್ಯರು ಶರಣಾಗಿದ್ದಾರೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಶರಣಾದ ನಕ್ಸಲರಿಗೆ ಹೂವುಗಳನ್ನು ನೀಡಿ ಬುಡಕಟ್ಟು ಸಮುದಾಯದ ಮುಖಂಡರು ಸ್ವಾಗತಿಸಿ, ಅಭಿನಂದಿಸಿದರು. ಬಳಿಕ ಅವರನ್ನು ಭದ್ರತಾ ಪಡೆ ಸಿಬ್ಬಂದಿ ಕರೆದೊಯ್ದರು. ನಕ್ಸಲರ ಶರಣಾಗತಿಯ ಬಗ್ಗೆ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಹಾಗೂ ಉಪ ಮುಖ್ಯಮಂತ್ರಿ ವಿಜಯ್ ಶರ್ಮಾ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಛತ್ತೀಸಗಢದ ಬಸ್ತಾರ್ ವಲಯವೂ ಸೇರಿದಂತೆ 2026ರ ಮಾರ್ಚ್ 31ರ ಒಳಗಾಗಿ ಭಾರತವನ್ನು ನಕ್ಸಲ್ ಮುಕ್ತ ದೇಶವನ್ನಾಗಿ ಮಾಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುನರುಚ್ಚರಿಸಿದ್ದಾರೆ. ಛತ್ತೀಸಗಢದ ಅಭುಜಮರ್ಧ್ ಮತ್ತು ಉತ್ತರ ಬಸ್ತಾರ್ ಪ್ರದೇಶವನ್ನು ಅಮಿತ್ ಶಾ ಅವರು ನಕ್ಸಲ್ ಮುಕ್ತ ಪ್ರದೇಶಗಳೆಂದು ಶುಕ್ರವಾರಷ್ಟೇ ಘೋಷಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.