ನವದೆಹಲಿ: ಶ್ರೀಲಂಕಾದಲ್ಲಿನ ತಮಿಳರ ರಕ್ಷಣೆ ಸಂಬಂಧ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮತದಾನದಿಂದ ಭಾರತ ದೂರ ಉಳಿದಿರುವುದನ್ನುಕಾಂಗ್ರೆಸ್ ನಾಯಕ ಪಿ. ಚಿದಂಬರಂ ಖಂಡಿಸಿದ್ದಾರೆ.
ಈ ಬಗ್ಗೆಬುಧವಾರ ಟ್ವೀಟ್ ಮಾಡಿರುವ ಅವರು, ತಮಿಳು ನಾಗರಿಕರು ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ‘ಎಐಎಡಿಎಂಕೆ–ಬಿಜೆಪಿ‘ ಮೈತ್ರಿಯನ್ನು ಶಿಕ್ಷಿಸುವ ಮೂಲಕ ಮತದಾನದಿಂದ ದೂರ ಉಳಿದವರಿಗೆ ಪಾಠ ಕಲಿಸಬೇಕು ಎಂದಿದ್ದಾರೆ.
‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಶ್ರೀಲಂಕಾ ವಿಚಾರದಲ್ಲಿ ಕೈಗೊಂಡಿರುವ ಈ ನಿರ್ಣಯಕ್ಕೆ ಸಂಬಂಧಿಸಿದ ಮತದಾನದಿಂದ ದೂರ ಉಳಿದಿದೆ. ಇದು ತಮಿಳರಿಗೆ ಮಾಡಿರುವ ದ್ರೋಹ‘ ಎಂದು ಚಿದಂಬರಂ ಟ್ವಿಟರ್ನಲ್ಲಿ ಬರೆದಿದ್ದಾರೆ.
‘ತಮಿಳುನಾಡಿನ ಜನತೆಯ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುವಂತಹ ಈ ಬೆಳವಣಿಯನ್ನು ವಿರೋಧಿಸುವ ಸಲುವಾಗಿ ತಮಿಳುನಾಡಿನ ಜನರು ಈ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟವನ್ನು ಶಿಕ್ಷಿಸಬೇಕು‘ ಎಂದು ತಿಳಿಸಿದ್ದಾರೆ.
ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ಹಿಂಸಾಚಾರ, ಅಪರಾಧದಂತಹ ಕಠಿಣ ಕ್ರಮಕ್ಕೆ ಮುಂದಾಗದಂತೆ ವಿಶ್ವಸಂಸ್ಥೆ ಮಾನವ ಹಕ್ಕುಗಳ ವೇದಿಕೆ(ಯುಎನ್ಎಚ್ಆರ್ಸಿ) ತೆಗೆದುಕೊಂಡಿರುವ ನಿರ್ಣಯ ಸಂಬಂಧ ನಡೆಯುತ್ತಿರುವ ಮತದಾನದಿಂದ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳು ದೂರ ಉಳಿದಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.