ADVERTISEMENT

ಚಿದಂಬರಂ ಕಸ್ಟಡಿ 30ರವರೆಗೆ ವಿಸ್ತರಣೆ

ಪಿಟಿಐ
Published 26 ಆಗಸ್ಟ್ 2019, 19:51 IST
Last Updated 26 ಆಗಸ್ಟ್ 2019, 19:51 IST
   

ನವದೆಹಲಿ: ಐಎನ್‌ಎಕ್ಸ್‌ ಮೀಡಿಯ ಹಗರಣದ ಆರೋಪದಡಿ ಸಿಬಿಐನಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರ ಕಸ್ಟಡಿಯನ್ನು ಆಗಸ್ಟ್‌ 30ರವರೆಗೆ ವಿಸ್ತರಿಸಿ ದೆಹಲಿ ಹೈಕೋರ್ಟ್‌ ಸೋಮವಾರ ಆದೇಶ ನೀಡಿದೆ.

‘ಕಾನೂನಿನ ಚೌಕಟ್ಟಿನೊಳಗೆ ಆರೋಪಿಯ ವಿಚಾರಣೆ ನಡೆಸುವ ಹಕ್ಕು ತನಿಖಾಧಿಕಾರಿಗೆ ಇರುತ್ತದೆ. ಆದ್ದರಿಂದ ಸಿಬಿಐಯ ಬೇಡಿಕೆಯು ಸಮರ್ಥನೀಯವಾದುದು. ಆರೋಪಿ ಚಿದಂಬರಂ ಅವರ ತನಿಖೆಗೆ ಸಿಬಿಐಗೆ ಇನ್ನಷ್ಟು ಅವಕಾಶ ನೀಡಬೇಕು ಎಂಬುದು ನನಗೆ ಮನವರಿಕೆಯಾಗಿದೆ. ಆದ್ದರಿಂದ ಅವರ ಕಸ್ಟಡಿಯ ಅವಧಿಯನ್ನು ಆಗಸ್ಟ್‌ 30ರವರೆಗೆ ವಿಸ್ತರಿಸುತ್ತಿದ್ದೇನೆ’ ಎಂದು ವಿಶೇಷ ನ್ಯಾಯಮೂರ್ತಿ ಅಜಯ್‌ ಕುಮಾರ್‌ ಕುಹರ್‌ ಹೇಳಿದರು.

ಕೆಲವು ಇ–ಮೇಲ್‌ ಹಾಗೂ ದೊಡ್ಡ ಮಟ್ಟದ ಸಂಚಿನ ಬಗ್ಗೆ ಮಾಹಿತಿ ಪಡೆಯಲು ಚಿದಂಬರಂ ಅವರನ್ನು ಇನ್ನಷ್ಟು ವಿಚಾರಣೆಗೆ ಒಳಪಡಿವ ಅಗತ್ಯವಿದೆ. ಅದಕ್ಕಾಗಿ ಇನ್ನೂ ಐದು ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂದು ಸಿಬಿಐ ಮನವಿ ಮಾಡಿತ್ತು.

ADVERTISEMENT

ಕಸ್ಟಡಿಯಲ್ಲಿ ಇರುವಷ್ಟು ದಿನವೂ ದಿನಕ್ಕೆ ಅರ್ಧ ಗಂಟೆ ಕಾಲ ಅವರನ್ನು ಭೇಟಿಮಾಡಲು ವಕೀಲರು ಹಾಗೂ ಚಿದಂಬರಂ ಅವರ ಸಂಬಂಧಿಕರಿಗೆ ನ್ಯಾಯಾಲಯವು ಅನುಮತಿ ನೀಡಿದೆ.

ಆಗಸ್ಟ್‌ 21ರಂದು ರಾತ್ರಿ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಿದ್ದರು. ಆ. 22ರಂದು ನ್ಯಾಯಾಲಯವು ಅವರನ್ನು ನಾಲ್ಕುದಿನಗಳ ಸಿಬಿಐ ಕಸ್ಟಡಿಗೆ ಒಪ್ಪಿಸಿದ್ದರು. ಆ ಅವಧಿ ಕೊನೆಗೊಂಡಿದ್ದರಿಂದ ಸೋಮವಾರ ಪುನಃ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.