'ಕೇಂದ್ರ ಸರ್ಕಾರವು ಬಡವರನ್ನು ಅವರಷ್ಟಕ್ಕೆ ಬಿಟ್ಟುಬಿಟ್ಟಿದೆ' ಎಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಟೀಕಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಭಾಷಣ ಮಾಡಿ, ಲಾಕ್ಡೌನ್ ಅವಧಿಯನ್ನು ಮೇ 3ರವರೆಗೆ ವಿಸ್ತರಣೆಯನ್ನು ಘೋಷಿಸಿದ ನಂತರ ಟ್ವೀಟ್ ಮೂಲಕ ಅವರುಪ್ರತಿಕ್ರಿಯಿಸಿದರು
'ಪ್ರಧಾನಿಯವರಿಗೂ ನಾವು ಹೊಸ ವರ್ಷದ ಶುಭಾಶಯಗಳನ್ನು ಹಾರೈಸುತ್ತೇವೆ. ಲಾಕ್ಡೌನ್ ವಿಸ್ತರಿಸಬೇಕಾದ ಅನಿವಾರ್ಯತೆ ನಮಗೆ ಅರ್ಥವಾಗುತ್ತೆ. ನಾವೆಲ್ಲರೂ ಪ್ರಧಾನಿಯ ನಿರ್ಧಾರವನ್ನು ಬೆಂಬಲಿಸುತ್ತೇವೆ. ಹಣಕಾಸಿನ ನೆರವಿಗಾಗಿ ಮುಖ್ಯಮಂತ್ರಿಗಳು ಮಾಡಿಕೊಂಡಿರುವ ವಿನಂತಿಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಮಾರ್ಚ್ 25, 2020ರಂದು ರೂಪಿಸಿರುವ ಸಂಕಷ್ಟ ನಿಧಿಗೆ ಒಂದೇ ಒಂದು ರೂಪಾಯಿ ಸೇರಿಸಿಲ್ಲ. ರಘುರಾಮ್ ರಾಜನ್ರಿಂದ ಜೀನ್ ಡ್ರೇಜ್, ಪ್ರಭಾತ್ ಪಟ್ನಾಯಕ್ರಿಂದ ಅಭಿಜಿತ್ ಬ್ಯಾನರ್ಜಿ ಅವರವರೆಗೆ ಹಲವು ತಜ್ಞರು ನೀಡಿರುವ ಸಲಹೆಗಳಿಗೆ ಸರ್ಕಾರ ಕಿವುಡಾಗಿದೆ' ಎಂದು ಚಿದಂಬರಂ ಹೇಳಿದ್ದಾರೆ.
'21+19 ದಿನಗಳ ಅವಧಿಯಲ್ಲಿ ತಮ್ಮ ಅಗತ್ಯಗಳನ್ನು ತಾವೇ ಪೂರೈಸಿಕೊಳ್ಳಬೇಕಾದ ಅನಿವಾರ್ಯತೆಗೆ ಬಡವರನ್ನು ದೂಡಲಾಗಿದೆ. ಹೊಟ್ಟೆಹೊರೆಯುವುದು ಅವರಿಗೆ ದೊಡ್ಡ ಕಷ್ಟವಾಗಿದೆ. ಹಣ ಇದೆ, ದುಡ್ಡು ಇದೆ. ಆದರೆ ಸರ್ಕಾರವು ಹಣವನ್ನಾಗಲೀ, ಆಹಾರವನ್ನಾಗಲೀ ಬಿಡುಗಡೆ ಮಾಡುತ್ತಿಲ್ಲ. ನನ್ನ ಪ್ರೀತಿಯ ದೇಶವೇ ಅತ್ತುಬಿಡು' ಎಂದು ಚಿದಂಬರಂ ಮತ್ತೊಂದು ಟ್ವೀಟ್ನಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿ, ಮೇ 3ರವರೆಗೆ ಲಾಕ್ಡೌನ್ ವಿಸ್ತರಿಸುವ ನಿರ್ಧಾರ ಪ್ರಕಟಿಸಿದರು. ದೇಶದಲ್ಲಿ ಈಗಾಗಲೇ ಲಾಕ್ಡೌನ್ ಜಾರಿಯಲ್ಲಿದ್ದರೂ 10,000ಕ್ಕೂ ಹೆಚ್ಚು ಮಂದಿಯಲ್ಲಿ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.