ADVERTISEMENT

ಬಾಲ್ಯವಿವಾಹ ಸಮಸ್ಯೆಗೆ ಬಂಧನವೊಂದೇ ಪರಿಹಾರವಲ್ಲ: ತಜ್ಞರ ಅಭಿಮತ

ಪಿಟಿಐ
Published 12 ಫೆಬ್ರುವರಿ 2023, 11:04 IST
Last Updated 12 ಫೆಬ್ರುವರಿ 2023, 11:04 IST
ಗುವಾಹಟಿಯಲ್ಲಿ ಬಾಲ್ಯವಿವಾಹದ ಪ್ರಕರಣಗಳಲ್ಲಿನ ಆರೋಪಿಗಳನ್ನು ಪೊಲೀಸರು ಬಂಧಿಸಿದರು –ಪಿಟಿಐ ಸಂಗ್ರಹ ಚಿತ್ರ 
ಗುವಾಹಟಿಯಲ್ಲಿ ಬಾಲ್ಯವಿವಾಹದ ಪ್ರಕರಣಗಳಲ್ಲಿನ ಆರೋಪಿಗಳನ್ನು ಪೊಲೀಸರು ಬಂಧಿಸಿದರು –ಪಿಟಿಐ ಸಂಗ್ರಹ ಚಿತ್ರ    

ಗುವಾಹಟಿ: ಅಸ್ಸಾಂನಲ್ಲಿ ಇತ್ತೀಚೆಗೆ ಬಾಲ್ಯವಿವಾಹಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರನ್ನು ಬಂಧಿಸಿರುವುದು ಅಲ್ಲಿನ ನಾಗರಿಕ ಸಮಾಜದಲ್ಲಿ ವಿಭಜನೆಯನ್ನು ಸೃಷ್ಟಿಸಿದೆ. ಈ ಸಮಸ್ಯೆಗೆ ಬಂಧನವೊಂದೇ ಪರಿಹಾರವಲ್ಲ, ಬದಲಿಗೆ ಬಾಲ್ಯವಿವಾಹದ ಪರಿಣಾಮಗಳ ಕುರಿತು ಸಮಾಜದಲ್ಲಿ ಜಾಗೃತಿಯನ್ನುಂಟು ಮಾಡುವ ಅವಶ್ಯಕತೆ ಇದೆ ಎಂದು ಅಲ್ಲಿನ ಸಾಮಾಜಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬಂಧನಕ್ಕೊಳಗಾದ ಮೂರು ಸಾವಿರ ಜನರನ್ನು ಸರ್ಕಾರವು ಜೈಲಿನಲ್ಲಿರಿಸಿದೆ. ಬಂಧಿತರಲ್ಲಿ ಬಹುತೇಕರು ಅವರ ಕುಟುಂಬಗಳಲ್ಲಿ ದುಡಿಮೆಯ ಆಧಾರವಾಗಿದ್ದವರು. ಹಾಗಾಗಿ, ಬಂಧನ ಪ್ರಕ್ರಿಯೆಯನ್ನು ವಿರೋಧಿಸಿ ಕುಟುಂಬಗಳ ಹೆಣ್ಣುಮಕ್ಕಳು ಪ್ರತಿಭಟನೆ ನಡೆಸುತ್ತಿದ್ದಾರೆ.

‘ಬಾಲ್ಯದಲ್ಲಿ ವಿವಾಹವಾದರು ಪ್ರೌಢಾವಸ್ಥೆಗೆ ಬಂದ ಎರಡು ವರ್ಷದೊಳಗೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು. ಆಗ ಬಾಲ್ಯವಿವಾಹವು ಅನೂರ್ಜಿತವಾಗುತ್ತದೆ’ ಎಂದು ಮಾನವ ಹಕ್ಕುಗಳ ವಕೀಲರಾದ ದೇಬಸ್ಮಿತಾ ಘೋಷ್ ಅಭಿಪ್ರಾಯಪಡುತ್ತಾರೆ.

ADVERTISEMENT

‘ಬಾಲ್ಯವಿವಾಹವು ಕಾನೂನು ಸಮಸ್ಯೆಯಲ್ಲ. ಅದೊಂದು ಸಾಮಾಜಿಕ ಪಿಡುಗು. ಇಂಥ ವಿವಾಹಗಳನ್ನು ನಡೆಯದಂತೆ ತಡೆಯುವುದೇ ಈ ಸಮಸ್ಯೆಗೆ ಪರಿಹಾರ’ ಎಂದು ಶಿಕ್ಷಣ ತಜ್ಞೆ, ನಿವೃತ್ತ ಪ್ರಾಧ್ಯಾಪಕಿ ಮನೋರಮಾ ಶರ್ಮಾ ಹೇಳುತ್ತಾರೆ.

‘ಮಹಿಳೆಯರ ಶಿಕ್ಷಣ, ಆರೋಗ್ಯ ಸೌಲಭ್ಯಗಳು ಮತ್ತು ಜೀವನೋಪಾಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ರೂಪಿಸುವ ಮೂಲಕ ಈ ಪಿಡುಗನ್ನು ನಿರ್ಮೂಲನೆ ಮಾಡಬಹುದು’ ಎಂದೂ ಅವರು ತಿಳಿಸಿದ್ದಾರೆ.

‘ಬಾಲ್ಯವಿವಾಹವನ್ನು ಲಿಂಗದ ದೃಷ್ಟಿಕೋನದಿಂದ ನೋಡಬೇಕಿದೆ. ಅಸಮಾನತೆಯು ಹೇಗೆ ಇಂಥ ಪದ್ಧತಿಗಳ ಮೇಲೆ ಪ್ರಭಾವ ಬೀರುತ್ತದೆ ಎಂಬುದನ್ನು ಅರಿಯಬೇಕಿದೆ. ಲೈಂಗಿಕ ಸಂತಾನೋತ್ಪತ್ತಿ, ಆರೋಗ್ಯ ಹಕ್ಕುಗಳು ಸೇರಿದಂತೆ ಇದಕ್ಕೆ ಸಂಬಂಧಿಸಿದ ಇತರ ವಿಷಯಗಳ ಬಗ್ಗೆ ಶಾಲಾ ಪಠ್ಯಕ್ರಮದಲ್ಲಿ ಅಳವಡಿಸಿ ಜಾಗೃತಿ ಮೂಡಿಸಬೇಕು’ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತೆ ಅನುರಿತಾ ಪಾಠಕ್ ಹಜಾರಿಕಾ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.