ADVERTISEMENT

ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಚೀನಾಗೆ ಭಾರತ ತಾಕೀತು

ಮಾಸ್ಕೊದಲ್ಲಿ ಭಾರತ-ಚೀನಾ ರಕ್ಷಣಾ ಸಚಿವರ ಸಭೆ

ಪಿಟಿಐ
Published 5 ಸೆಪ್ಟೆಂಬರ್ 2020, 10:36 IST
Last Updated 5 ಸೆಪ್ಟೆಂಬರ್ 2020, 10:36 IST
ಮಾಸ್ಕೊದಲ್ಲಿ ಶುಕ್ರವಾರ ಸಂಜೆ ಚೀನಾದ ರಕ್ಷಣಾ ಸಚಿವರ ಜೊತೆಗೆ ನಡೆದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮಾಸ್ಕೊದಲ್ಲಿ ಶುಕ್ರವಾರ ಸಂಜೆ ಚೀನಾದ ರಕ್ಷಣಾ ಸಚಿವರ ಜೊತೆಗೆ ನಡೆದ ಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರೆ ಅಧಿಕಾರಿಗಳು ಪಾಲ್ಗೊಂಡಿದ್ದರು.   

ನವದೆಹಲಿ: ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು (ಎಲ್ಎಸಿ) ಬದಲಿಸಲು ಯತ್ನಿಸದೇ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಚೀನಾದ ರಕ್ಷಣಾ ಸಚಿವರಿಗೆ ಸ್ಪಷ್ಟಮಾತುಗಳಲ್ಲಿ ಹೇಳಿದ್ದಾರೆ.

ಪೂರ್ವ ಲಡಾಖ್ ಭಾಗದಲ್ಲಿ ಉದ್ವಿಗ್ನ ಸ್ಥಿತಿ ತಲೆದೋರಿದ್ದರಿಂದ ಚೀನಾದ ರಕ್ಷಣಾ ಸಚಿವ ಜನರಲ್ ವೀ ಫೆಂಗ್‌ ಮತ್ತು ರಾಜನಾಥ್ ಸಿಂಗ್ ನಡುವೆ ಮಾಸ್ಕೊದಲ್ಲಿ ಸಭೆ ನಡೆಯಿತು.

ವಾಸ್ತವ ಗಡಿ ನಿಯಂತ್ರಣ ರೇಖೆಯ ಸ್ಥಿತಿಯನ್ನು ಚೀನಾ ಗೌರವಿಸಬೇಕು. ಭಾರತ ಎಂದಿಗೂ ತನ್ನ ಸಾರ್ವಭೌಮತೆ ಮತ್ತು ಗಡಿಯನ್ನು ಕಾಯ್ದುಕೊಳ್ಳಲು ಶಕ್ತವಾಗಿದೆ ಎಂದು ಸಚಿವರು ಹೇಳಿದರು ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

ADVERTISEMENT

ಉಭಯ ನಾಯಕರ ನಡುವೆಶುಕ್ರವಾರ ಸಂಜೆ ಮಾಸ್ಕೊದಲ್ಲಿ ಸುಮಾರು 2 ಗಂಟೆ 20 ನಿಮಿಷ ಸಭೆ ನಡೆಯಿತು. ಶಾಂಘೈ ಸಹಕಾರ ಸಂಘಟನೆಯ (ಎಸ್.ಸಿ.ಒ) ಸಭೆಗಾಗಿ ಉಭಯ ನಾಯಕರು ಅಲ್ಲಿ ಸೇರಿದ್ದರು.

‘ರಕ್ಷಣಾ ಸಚಿವರು ಗಡಿಯಲ್ಲಿ ಈಗ ನಿರ್ಮಾಣ ಆಗಿರುವ ಪರಿಸ್ಥಿತಿಯನ್ನು ಜವಾಬ್ದಾರಿಯಿಂದ ನಿರ್ವಹಣೆ ಮಾಡಬೇಕು. ಎರಡೂ ದೇಶಗಳು ತೋರುವ ಯಾವುದೇ ಕ್ರಿಯೆಗಳು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು. ಪ್ರಚೋದನಾಕಾರಿ ವರ್ತನೆ, ವಾಸ್ತವ ರೇಖೆ ಬದಲಿಸುವ ಯತ್ನಗಳು ಗಡಿ ಸಮಸ್ಯೆ ಕುರಿತಂತೆ ಈ ಹಿಂದೆ ಆಗಿರುವ ದ್ವಿಪಕ್ಷೀಯ ಮಾತುಕತೆಗಳ ಉಲ್ಲಂಘನೆಯಾಗಲಿದೆ ಎಂದುಚೀನಾದ ನಾಯಕರಿಗೆ ಹೇಳಿದರು' ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೊಡ್ಡ ಸಂಖ್ಯೆಯಲ್ಲಿ ಸೇನೆಯನ್ನು ನಿಯೋಜಿಸುವುದು ಸೇರಿದಂತೆ ಚೀನಾ ಸೇನೆಯ ಪ್ರಚೋದನಾಕಾರಿ ವರ್ತನೆ ಕ್ರಮಗಳನ್ನು ಅವರು ವೀ ಫೆಂಗ್‌ ಅವರ ಗಮನಕ್ಕೆ ತಂದರು. ವಿವಾದ ಬಗೆಹರಿಸಲು ಎರಡೂ ದೇಶಗಳು ಚರ್ಚೆ ಮುಂದುವರಿಸಬೇಕು. ಅದು, ರಾಜತಾಂತ್ರಿಕ ಮತ್ತು ಸೇನಾ ಹಂತದ ನಡುವೆಯೂ ಆಗಬಹುದು. ಪೂರಕವಾಗಿ, ಗಡಿ ಭಾಗದಿಂದ ಸೇನೆಯನ್ನು ಸಂಪೂರ್ಣವಾಗಿ ಆದಷ್ಟು ಬೇಗನೇ ಹಿಂತೆಗೆದುಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಅವರು ತಾಕೀತು ಮಾಡಿದರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.