ಬೆಂಗಳೂರು: ‘ಪ್ರಧಾನಿ ನರೇಂದ್ರ ಮೋದಿ ಏನು ಮಾಡುತ್ತಿದ್ದಾರೆ ಎಂಬುವುದು ಅವರ ಸಚಿವ ಸಂಪುಟದ ಸಹೋದ್ಯೋಗಿಗಳಿಗೇ ಗೊತ್ತಾಗುವುದಿಲ್ಲ’ ಎಂದು ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಭಾನುವಾರ ಮಾತನಾಡಿದ ಅವರು, ‘ಲೇಹ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಲಿದ್ದಾರೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಮೋದಿಯವರೇ ಹೋಗಿ ಬಂದಿದ್ದಾರೆ. ಅಲ್ಲಿನ ಸ್ಥಿತಿ ನೋಡಿ ಬಂದ ಬಳಿಕವಾದರೂ ವಸ್ತುಸ್ಥಿತಿಯನ್ನು ಜನರಿಗೆ ತಿಳಿಸಬೇಕಲ್ಲವೇ’ ಎಂದು ಖರ್ಗೆ ಪ್ರಶ್ನಿಸಿದರು.
‘ಭಾರತ ಚೀನಾ ಗಡಿಯಲ್ಲಿ ಜೂನ್ 15ರಂದು ಏನು ನಡೆದಿತ್ತು ಎನ್ನುವುದನ್ನು ಮೋದಿ ಜನರಿಗೆ ತಿಳಿಸಬೇಕು. ಮೊದಲಿನಿಂದಲೂ ನಾವು (ಕಾಂಗ್ರೆಸ್) ಇದನ್ನು ಕೇಳುತ್ತಿದ್ದೇವೆ. ಇದೀಗ ಯಾವ ವಿಷಯವನ್ನು ಜನರ ಮುಂದಿಡುತ್ತಾರೆಂದು ನೋಡಬೇಕು’ ಎಂದರು.
'ನಾವು ಏನೇ ಮಾಡಿದರೂ ದೇಶದ್ರೋಹಿಗಳು. ಒಳ್ಳೆಯ ಸಲಹೆ ಕೊಟ್ಟರೂ, ತಪ್ಪು ಖಂಡಿಸಿದರೂ ದೇಶದ್ರೋಹಿಗಳು ಎಂದು ಬಿಂಬಿಸುತ್ತಾರೆ. ಸತ್ಯಾಂಶವನ್ನು ಅವರೇ ತಿಳಿಸಲಿ’ ಎಂದರು.
‘ದೇಶ ಒಟ್ಟಾಗಿರಬೇಕು. ಸೈನಿಕರಿಗೆ ಬೆಂಬಲ ನೀಡಬೇಕು. ದೇಶವನ್ನು ನಾವು ಉಳಿಸಿಕೊಳ್ಳಬೇಕಿದೆ. ಒಂದಿಂಚು ಭೂಮಿ ಕೂಡಾ ಬೇರೆಯವರಿಗೆ ಹೋಗಬಾರದು. ಅದಕ್ಕೆ ನಾವು ಬೆಂಬಲ ನೀಡುತ್ತೇವೆ’ ಎಂದರು.
‘ಒಂದು ಕಡೆ ಕೋವಿಡ್. ಇನ್ನೊಂದು ಕಡೆ ಚೀನಾ ಉಪಟಳ. ಈಗ ದೇಶ ಒಟ್ಟಾಗಿರಬೇಕಾದ ದಿನಗಳು. ಹೀಗಾಗಿ, ವಾಸ್ತವ ವಿಷಯಗಳನ್ನು ಜನರಿಗೆ ತಿಳಿಸಬೇಕು’ ಎಂದು ಕೇಂದ್ರ ಸರ್ಕಾರವನ್ನು ಖರ್ಗೆ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.