ADVERTISEMENT

ಚಿನ್ಮಯಾನಂದ ಪ್ರಕರಣ ಕೈ ಬಿಡುವುದಕ್ಕಾಗಿ ಒತ್ತಡ ಹೇರಲಾಗುತ್ತಿದೆ:ಸಂತ್ರಸ್ತೆಯ ಅಪ್ಪ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2019, 5:09 IST
Last Updated 26 ಸೆಪ್ಟೆಂಬರ್ 2019, 5:09 IST
ಎಸ್‌ಐಟಿ ಮುಖ್ಯಸ್ಥ ನವೀನ್ ಅರೋರಾ ಪತ್ರಿಕಾಗೋಷ್ಠಿ
ಎಸ್‌ಐಟಿ ಮುಖ್ಯಸ್ಥ ನವೀನ್ ಅರೋರಾ ಪತ್ರಿಕಾಗೋಷ್ಠಿ    

ಲಖನೌ:ಬಿಜೆಪಿ ಮುಖಂಡ ಸ್ವಾಮಿ ಚಿನ್ಮಯಾನಂದ ವಿರುದ್ದಅತ್ಯಾಚಾರ ಪ್ರಕರಣವನ್ನು ಕೈ ಬಿಡುವುದಕ್ಕಾಗಿ ಒತ್ತಡ ಹೇರಲಾಗುತ್ತಿದೆ. ಸಂತ್ರಸ್ತೆಯನ್ನು ಸುಲಿಗೆ ಆರೋಪದಲ್ಲಿ ಬಂಧಿಸಿದ್ದು ಈ ಕಾರಣದಿಂದಲೇ ಎಂದು ಸಂತ್ರಸ್ತೆಯ ಅಪ್ಪ ದೂರಿದ್ದಾರೆ.

ಲೈಂಗಿಕ ದೌರ್ಜನ್ಯದ ವಿಡಿಯೊಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲಾಗುವುದು ಎಂದು ವಿದ್ಯಾರ್ಥಿನಿಯ ಮೂವರು ಸ್ನೇಹಿತರು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದಾರೆ ಎಂದು ಸ್ವಾಮಿ ಚಿನ್ಮಯಾನಂದ ದೂರು ಸಲ್ಲಿಸಿದ್ದರು. ಈ ಮೂವರ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ನಲ್ಲಿ ಅತ್ಯಾಚಾರ ಸಂತ್ರಸ್ತೆ, 23ರ ಹರೆಯದ ಕಾನೂನು ವಿದ್ಯಾರ್ಥಿನಿಯ ಹೆಸರನ್ನು ಸೇರಿಸಲಾಗಿತ್ತು.

ಸೆಪ್ಟೆಂಬರ್ 25ರಂದು ವಿದ್ಯಾರ್ಥಿನಿಯನ್ನು ಹೆಚ್ಚುವರಿ ಜ್ಯೂಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಿದ್ದು, ನ್ಯಾಯಾಲಯ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.


ಈ ಬಗ್ಗೆ ದಿ ಇಂಡಿಯನ್ ಎಕ್ಸ್‌ಪ್ರೆಸ್ ಜತೆ ಮಾತನಾಡಿದ ಸಂತ್ರಸ್ತೆಯ ಅಪ್ಪ, ವಿಶೇಷ ತನಿಖಾ ತಂಡ ಸುಳ್ಳು ಆರೋಪ ಹೊರಿಸಿ ನನ್ನ ಮಗಳನ್ನು ಬಂಧಿಸಿದೆ. ಸುಲಿಗೆ ಆರೋಪದಲ್ಲಿ ಬಂಧಿಸಿರುವ ಮೂವರು ಯುವಕರೊಂದಿಗೆ ನನ್ನ ಮಗಳು ಸಂಪರ್ಕ ಹೊಂದಿದ್ದಾಳೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲ. ನನ್ನ ಮಗಳು ಯಾವುದೇ ತಪ್ಪು ಮಾಡಿಲ್ಲ. ವಿಶೇಷ ತನಿಖಾ ತಂಡ ಮಾಧ್ಯಮಗಳ ಮುಂದೆ ಸುಳ್ಳು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ.

ಬಂಧನಕ್ಕೆ ಮುನ್ನವೇ ವಿದ್ಯಾರ್ಥಿನಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಶಹಜಹಂಪುರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯ ಸ್ವೀಕರಿಸಿದ್ದು, ಗುರುವಾರ ವಿಚಾರಣೆ ನಡೆಯಲಿದೆ. ಅತ್ಯಾಚಾರ ಪ್ರಕರಣದ ತನಿಖೆ ಕೈಗೊಂಡಿರುವ ವಿಶೇಷ ತನಿಖಾ ತಂಡದ ಅಧಿಕಾರಿಗಳು (ಎಸ್‌ಐಟಿ) ಬೆಳಿಗ್ಗೆ ಮನೆ ಮೇಲೆ ದಾಳಿ ನಡೆಸಿ ವಿದ್ಯಾರ್ಥಿನಿಯನ್ನು ಎಳೆದೊಯ್ದರು ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.