
ಚಿರಾಗ್ ಪಾಸ್ವಾನ್
ಪಿಟಿಐ
ಪಟ್ನಾ: ಬಿಹಾರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಟ್ಟು ‘ದುರಾಸೆ’ ಪ್ರದರ್ಶಿಸಿಸಲಾರೆ, ಸಚಿವ ಸಂಪುಟದಲ್ಲಿ ತಮ್ಮ ಪಕ್ಷ ಲೋಕ ಜನಶಕ್ತಿ ಪಕ್ಷಕ್ಕೆ (ರಾಮ್ ವಿಲಾಸ್) ಎರಡು ಸ್ಥಾನಗಳನ್ನು ನೀಡಿದ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.
ಪಟ್ನಾದಲ್ಲಿ ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್ಡಿಎ ಮಿತ್ರ ಪಕ್ಷವಾಗಿ ಬಿಹಾರದಾಚೆಗೂ ಪಶ್ಚಿಮ ಬಂಗಾಳ, ಪಂಜಾಬ್ ಹಾಗೂ ಉತ್ತರ ಪ್ರದೇಶದಲ್ಲಿ ಪಕ್ಷದ ನೆಲೆಯನ್ನು ವಿಸ್ತರಿಸುವ ಬಯಕೆ ಇದೆ ಎಂದು ಹೇಳಿದ್ದಾರೆ.
ಎನ್ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆಯಲ್ಲಿ ಲಭಿಸಿದ 29 ಕ್ಷೇತ್ರಗಳ ಪೈಕಿ ನಮ್ಮ ಪಕ್ಷವು 19ರಲ್ಲಿ ಗೆದ್ದಿದೆ. ಮೈತ್ರಿಕೂಟ ದುರ್ಬಲವಾಗಿರುವ ಕಡೆಗಳಲ್ಲಿ ನಾವು ಸ್ಪರ್ಧಿಸಿ ಗೆದ್ದಿದ್ದೇವೆ. ನಮ್ಮ ಪಕ್ಷಕ್ಕೆ ಜನರ ಆಶೀರ್ವಾದ ಹಾಗೂ ಪ್ರಧಾನ ಮಂತ್ರಿಗಳ ಬೆಂಬಲದಿಂದ ಇದು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.
‘ಈಗ ಬಿಹಾರ ಸಚಿವ ಸಂಪುಟದಲ್ಲಿ ನಮ್ಮ ಪಕ್ಷಕ್ಕೆ ಎರಡು ಸ್ಥಾನಗಳು ಲಭಿಸಿದೆ. ಇದು ಸಾಕು. ಚಿರಾಗ್ ಪಾಸ್ವಾನ್ ಎಷ್ಟೊಂದು ದುರಾಸೆ ಹೊಂದಿರಬೇಕು?’ ಎಂದು ಅವರು ಪ್ರಶ್ನಿಸಿದ್ದಾರೆ.
ಉಪಮುಖ್ಯಮಂತ್ರಿ ಸ್ಥಾನಕ್ಕೆ ಬೇಡಿಕೆ ಇಡುತ್ತೀರಾ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ‘2021ರಲ್ಲಿ ನನ್ನ ಹತ್ತಿರ ಯಾರೊಬ್ಬರು ಇರಲಿಲ್ಲ. ನನ್ನ ಪಕ್ಷ ಇಬ್ಭಾಗವಾಯಿತು. 2024ರ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ ಮೇಲೆ ನಂಬಿಕೆ ಇಟ್ಟು ಪ್ರಧಾನಿ ನರೇಂದ್ರ ಮೋದಿ 5 ಸ್ಥಾನಗಳನ್ನು ನೀಡಿದರು. ನಾವು ಐದರಲ್ಲೂ ಗೆದ್ದೆವು. ಈಗ ಮೈತ್ರಿಕೂಟದಲ್ಲಿ ನಾವೇನಾದರೂ ಕೇಳಿದರೆ ನನಗಿಂತ ಹೆಚ್ಚು ದುರಾಸೆ ಹೊಂದಿರುವವರು ಯಾರು?’ ಎಂದರು.
‘ವಿಧಾನಸಭೆ ಚುನಾವಣೆಯಲ್ಲಿ 19 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಬಳಿಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಹಾಗೂ ಪಂಜಾಬ್ನಲ್ಲಿ ನಮ್ಮ ಪಕ್ಷದ ನೆಲೆ ವಿಸ್ತರಿಸಲು ನಾವು ಗಹನವಾದ ಚಿಂತನೆ ನಡೆಸುತ್ತಿದ್ದೇವೆ. ಅಲ್ಲಿನ ಮುಂಬರುವ ಚುನಾವಣೆಯಲ್ಲಿ ಎನ್ಡಿಎ ಭಾಗವಾಗಿ ನಾವು ಸ್ಪರ್ಧಿಸುತ್ತೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.