ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ಸಂಪುಟದ ಇತರ ಸಚಿವರು ಜಾರ್ಖಂಡ್ ವಿಧಾನಸಭಾ ಸದಸ್ಯರಾಗಿ ಅಧಿವೇಶನದ ಮೊದಲ ದಿನ ಪ್ರಮಾಣ ವಚನ ಸ್ವೀಕರಿಸಿದರು.
ಸಂಸದೀಯ ವ್ಯವಹಾರಗಳ ಸಚಿವ ರಾಧಾಕೃಷ್ಣ ಕಿಶೋರ್, ಕಂದಾಯ ಮತ್ತು ಭೂ ಸುಧಾರಣಾ ಸಚಿವ ದೀಪಕ್ ಬಿರುವಾ ಮತ್ತು ಕಾರ್ಮಿಕ ಸಚಿವ ಸಂಜಯ್ ಪ್ರಸಾದ್ ಯಾದವ್ ಅವರು ವಿಧಾನಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಹಂಗಾಮಿ ಸ್ಪೀಕರ್ ಸ್ಟೀಫನ್ ಮರಾಂಡಿ ಅವರು ಪ್ರಮಾಣ ವಚನ ಬೋಧಿಸಿದರು. ನಾಲ್ಕು ದಿನಗಳ ಈ ಅಧಿವೇಶನದಲ್ಲಿ ಸ್ಪೀಕರ್ ಸ್ಥಾನಕ್ಕೆ ಚುನಾವಣೆ, ರಾಜ್ಯಪಾಲರ ಭಾಷಣ, ಎರಡನೇ ಪೂರಕ ಬಜೆಟ್ ಮಂಡನೆ ಮತ್ತು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ನಡೆಯಲಿದೆ.
ರವೀಂದ್ರ ನಾಥ ಮಹತೋ ಹೆಸರು ಶಿಫಾರಸು: ಜಾರ್ಖಂಡ್ ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ನಾಲಾ ವಿಧಾನಸಭಾ ಕ್ಷೇತ್ರದ ಶಾಸಕ ರವೀಂದ್ರ ನಾಥ ಮಹತೋ ಅವರ ಹೆಸರನ್ನು ಆಡಳಿತ ಮೈತ್ರಿಕೂಟ ಶಿಫಾರಸು ಮಾಡಿದೆ ಎಂದು ಮುಖ್ಯಮಂತ್ರಿ ಹೇಮಂತ್ ಸೊರೇನ್ ಹೇಳಿದ್ದಾರೆ.
ಹಿಂದಿನ ವಿಧಾನಸಭೆಯಲ್ಲೂ ಮಹತೋ ಸ್ಪೀಕರ್ ಆಗಿದ್ದರು. ಅಧಿವೇಶನದ ಎರಡನೇ ದಿನವಾದ ಮಂಗಳವಾರ ಸ್ಪೀಕರ್ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಹತೋ ಅವರು ವಿಧಾನಸಭಾ ಸದಸ್ಯರಾಗಿ ಇತರೆ ಶಾಸಕರೊಂದಿಗೆ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.