ADVERTISEMENT

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣ: ಪಶ್ಚಿಮ ಬಂಗಾಳ ಸಚಿವರ ಮನೆ ಮೇಲೆ ಸಿಬಿಐ ದಾಳಿ

ಪಿಟಿಐ
Published 7 ಸೆಪ್ಟೆಂಬರ್ 2022, 5:36 IST
Last Updated 7 ಸೆಪ್ಟೆಂಬರ್ 2022, 5:36 IST
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಜೊತೆ ಮಲಯ ಘಟಕ್‌ | ಸಾಂದರ್ಭಿಕ ಚಿತ್ರ | ಪಿಟಿಐ
ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ಜೊತೆ ಮಲಯ ಘಟಕ್‌ | ಸಾಂದರ್ಭಿಕ ಚಿತ್ರ | ಪಿಟಿಐ   

ಕೋಲ್ಕತ್ತ: ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದ ಸಚಿವ ಮಲಯ ಘಟಕ್‌ ಅವರಿಗೆ ಸೇರಿದ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಪಶ್ಚಿಮ ಬರ್ಧಮಾನ್‌ ಜಿಲ್ಲೆಯ ಅಸನ್ಸೋಲ್‌ ಪ್ರದೇಶದಲ್ಲಿರುವ ಘಟಕ್‌ ಅವರ ಮೂರು ನಿವಾಸಗಳ ಮೇಲೆ ಹಾಗೂ ಕೋಲ್ಕತ್ತದ ಲೇಕ್‌ ಗಾರ್ಡನ್‌ ಪ್ರದೇಶದಲ್ಲಿರುವ ಒಂದು ಮನೆಯ ಮೇಲೆ ಕೇಂದ್ರ ತನಿಖಾ ದಳ (ಸಿಬಿಐ) ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೊಡ್ಡ ಸಂಖ್ಯೆಯ ಅರೆಸೇನಾ ಪಡೆ ಸಿಬ್ಬಂದಿಯೊಂದಿಗೆ ಸಿಬಿಐ ಶೋಧ ಕಾರ್ಯ ನಡೆಸುತ್ತಿದೆ. ತಂಡದಲ್ಲಿ ಮಹಿಳಾ ಅಧಿಕಾರಿಗಳು ಸೇರಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಕಲ್ಲಿದ್ದಲು ಕಳ್ಳಸಾಗಣೆ ಪ್ರಕರಣದಲ್ಲಿ ಸಚಿವ ಘಟಕ್‌ ಅವರ ಹೆಸರು ಕೇಳಿಬಂದಿದೆ. ಹಗರಣದಲ್ಲಿ ಘಟಕ್‌ ಅವರ ಪಾತ್ರವೇನು ಎಂದು ತಿಳಿಯಬೇಕಿದೆ. ಹಗರಣದಲ್ಲಿ ಅವರು ಪಾಲ್ಗೊಂಡಿರುವ ಬಗ್ಗೆ ಪೂರಕ ಸಾಕ್ಷ್ಯಗಳು ಇವೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಿಬಿಐ ದಾಳಿ ನಡೆಸಿರುವ ಯಾವ ನಿವಾಸದಲ್ಲಿಯೂ ಘಟಕ್‌ ಅವರು ಇರಲಿಲ್ಲ. ಅವರ ಕುಟುಂಬ ಸದಸ್ಯರ ಮೊಬೈಲ್‌ ಫೋನ್‌ಗಳನ್ನು ವಶ ಪಡಿಸಿಕೊಳ್ಳಲಾಗಿದ್ದು, ಎಲ್ಲರನ್ನೂ ಕೊಠಡಿಯೊಂದರಲ್ಲಿ ಕೂಡಿಡಲಾಗಿದೆ. ನಿವಾಸಗಳ ಸುತ್ತಲೂ ಕೇಂದ್ರ ಅರೆಸೇನಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಸಿಬಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.