ನವದೆಹಲಿ: ಚೀನಾದ ಸೆರೆಯಲ್ಲಿದ್ದ ಗಾಯಗೊಂಡಿದ್ದ ಭಾರತೀಯ ಯೋಧರನ್ನು ತೋರಿಸುವ ಗಾಲ್ವನ್ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ಕೇಂದ್ರ ಸರ್ಕಾರದ ಮೌನವನ್ನು ಪ್ರಶ್ನಿಸಿರುವ ಕಾಂಗ್ರೆಸ್, ಇದು ನಿಜವಾಗಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಪವನ್ ಖೇರಾ, ‘ಚೀನಾದವರು ಬಿಡುಗಡೆ ಮಾಡಿರುವ ಗಾಲ್ವನ್ ವಿಡಿಯೊವನ್ನು ನೋಡಿದರೆ ಪ್ರತಿ ಭಾರತೀಯನಿಗೂ ನೋವುಂಟಾಗುತ್ತದೆ. ನಮ್ಮ ಧೈರ್ಯಶಾಲಿ ಯೋಧರು ಗಾಯಗೊಂಡಿದ್ದು, ಚೀನಾದ ಸೆರೆಯಲ್ಲಿದ್ದಾರೆ. ಯುದ್ಧದ ಅಪರಾಧಗಳಿಗೆ ಚೀನಾ ಜವಾಬ್ದಾರನಾಗಬೇಕಾಗುತ್ತದೆ’ ಎಂದು ಹೇಳಿದ್ದಾರೆ.
‘ಈ ವಿಡಿಯೊದ ಸತ್ಯಾಸತ್ಯತೆಯ ಬಗ್ಗೆ ನಮ್ಮ ಸರ್ಕಾರ ಏಕೆ ಮೌನವಾಗಿದೆ. ಈ ವಿಡಿಯೊ ನಿಜವೇ ಆಗಿದ್ದರೆ ಇದು ಯುದ್ಧದ ಅಪರಾಧವಾಗುತ್ತದೆ. ಚೀನಾದ ಈ ಅಪರಾಧ ಕೃತ್ಯವು ಅಂತರರಾಷ್ಟ್ರೀಯ ನ್ಯಾಯಾಲಯದ ಅಡಿಯಲ್ಲಿ ವಿಚಾರಣೆಗೆ ಬರುತ್ತದೆ. ಪ್ರಧಾನಿ ಮತ್ತು ಗೃಹಸಚಿವರು ಪರಸ್ಪರ ತಮ್ಮ ಬೆನ್ನು ತಟ್ಟಿಕೊಳ್ಳುವ ಬದಲು ತನ್ನ ಅಪರಾಧ ಕೃತ್ಯಕ್ಕಾಗಿ ಚೀನಾ ಜಾಗತಿಕ ಮಟ್ಟದಲ್ಲಿ ಜವಾಬ್ದಾರನಾಗುವ ಕುರಿತು ಖಚಿತಪಡಿಸಿಕೊಳ್ಳಬೇಕು’ ಎಂದು ಖೇರಾ ತಿಳಿಸಿದ್ದಾರೆ.
‘ಸರ್ಕಾರವು ಈ ವಿಡಿಯೊ ಕುರಿತು ಇದುವರೆಗೆ ಪ್ರತಿಕ್ರಿಯಿಸಿಲ್ಲ. ಆದರೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದಾರೆ. ‘ದೃಢಪಟ್ಟರೆ ಇದು ಭಯಾನಕ ದೃಶ್ಯ. ಮೋದಿ ಸರ್ಕಾರವು ಹೃದಯಹೀನವಾಗಿದೆ’. ‘ಗಾಲ್ವನ್ ಯುದ್ಧದಲ್ಲಿ ಸತ್ತವರಿಗೆ ಮೋದಿ ಸರ್ಕಾರವು ಯಾವುದೇ ಗೌರವ ನೀಡಲಿಲ್ಲ? ಪುಲ್ವಾಮ ಸಿಆರ್ಪಿಎಫ್ ಯೋಧರ ಯುದ್ಧವಲ್ಲದ ಸಾವುಗಳಿಗಾಗಿ (ಅವರನ್ನು ಹೊತ್ತೊಯ್ಯುತ್ತಿದ್ದ ಬಸ್ ಸ್ಫೋಟಿಸಲಾಯಿತು), ರಾಷ್ಟ್ರವ್ಯಾಪಿ ಶೋಕಾಚರಣೆ ಮಾಡಲಾಯಿತು’ ಎಂದು ಸ್ವಾಮಿ ಟ್ವೀಟ್ನಲ್ಲಿ ಹೇಳಿದ್ದಾರೆ’ ಎಂದು ಖೇರಾ ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.