ನವದೆಹಲಿ: ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಶನಿವಾರ ಪ್ರಕಟವಾದ ಚುನಾವಣೋತ್ತರ ಸಮೀಕ್ಷೆಗಳನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ಪಕ್ಷ ಹಿಂದಿಗಿಂತಲೂ ಈ ಬಾರಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದೆ. ಆದರೆ, ಚುನಾವಣೋತ್ತರ ಸಮೀಕ್ಷೆಗಳನ್ನು ತಾವು ನಂಬುವುದಿಲ್ಲ ಎಂದು ದೆಹಲಿಯ ಕಾಂಗ್ರೆಸ್ ಮುಖಂಡರಾದ ಪಿ.ಸಿ.ಚಾಕೋ ಹಾಗೂ ಕೀರ್ತಿ ಅಜಾದ್ ಹೇಳಿದ್ದಾರೆ.
ಛತ್ತೀಸ್ಘಡ ಮತ್ತು ಜಾರ್ಖಂಡ್ ರಾಜ್ಯಗಳಲ್ಲಿ ಇದೇ ರೀತಿ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿದ್ದವು. ಆದರೆ, ಕಾಂಗ್ರೆಸ್ ಸಮೀಕ್ಷೆಗಳನ್ನು ಮೀರಿ ಉತ್ತಮ ಸ್ಥಿತಿಯಲ್ಲಿತ್ತು. ನಾವು ಸಂಪೂರ್ಣ ಬಹುಮತ ಪಡೆಯುತ್ತೇವೆ ಎಂದು ಹೇಳುತ್ತಿಲ್ಲ. ಆದರೆ, ಹಿಂದಿಗಿಂತ ಉತ್ತಮ ಸ್ಥಿತಿಯಲ್ಲಿರುತ್ತೇವೆ ಎಂದು ಚಾಕೋ ಅಭಿಪ್ರಾಯಪಟ್ಟಿದ್ದಾರೆ.
ಇದೇ ರೀತಿ ಕೀರ್ತಿ ಆಜಾದ್ ಪ್ರತಿಕ್ರಿಯೆ ನೀಡಿ, ಹರಿಯಾಣ ವಿಧಾನಸಭಾ ಚುನಾವಣೋತ್ತರ ಸಮೀಕ್ಷೆಗಳಲ್ಲೂ ಇದೇ ರೀತಿಯಾಯಿತು.ಸಮೀಕ್ಷೆಗಳು ಹರಿಯಾಣದಲ್ಲಿ ಕಾಂಗ್ರೆಸ್ ಕೇವಲ 3 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದ್ದವು. ಆದರೆ, ಹರಿಯಾಣದಲ್ಲಿ 31 ಸ್ಥಾನಗಳನ್ನು ಪಡೆದೆವು. ಅದೇ ರೀತಿ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಘಡದಲ್ಲಿ ಬಿಜೆಪಿ ಸರ್ಕಾರ ರಚನೆ ಮಾಡಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು. ಆದರೆ, ಈ ಮೂರು ರಾಜ್ಯಗಳಲ್ಲಿ ನಾವು ಸರ್ಕಾರ ರಚನೆ ಮಾಡಿದೆವು. ದೆಹಲಿ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನಗಳನ್ನು ಪಡೆಯುವ ವಿಶ್ವಾಸವಿದೆ ಎಂದು ಕೀರ್ತಿಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳು ತಮ್ಮದೇ ಆದ ಮತದಾರರನ್ನು ಹೊಂದಿವೆ. ಮುಖ್ಯಮಂತ್ರಿಅರವಿಂದ ಕೇಜ್ರಿವಾಲ್ ಅವರು ಶಹೀನಾ ಬಾಗ್ ಪ್ರಕರಣದಲ್ಲಿ ಮೌನವಹಿಸಿದ್ದು ಮುಸ್ಲಿಂ ಮತಗಳು ಈ ಬಾರಿ ಆಮ್ ಆದ್ಮಿ ಪಕ್ಷಕ್ಕೆ ಬದಲಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹರಿದು ಬರಲು ಕಾರಣವಾಗಿದೆ. ಬಿಜೆಪಿ ಕೂಡ ಆಮ್ ಆದ್ಮಿ ಪಕ್ಷದಿಂದ ಸ್ವಲ್ಪ ಪ್ರಮಾಣದ ಮತಗಳನ್ನು ತನ್ನತ್ತ ಸೆಳೆದಿದೆ ಎನ್ನಲಾಗಿದೆ.
ಹಿರಿಯ ಮುಖಂಡರ ಪ್ರಕಾರ, ದೆಹಲಿಯಲ್ಲಿ ಈ ಬಾರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮುಸ್ಲಿಂ ಮತದಾರರು ಕಾಂಗ್ರೆಸ್ಗಿಂತ ಆಮ್ ಆದ್ಮಿ ಪಕ್ಷದತ್ತ ವಾಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.