ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ‘ದೋಷಯುಕ್ತ ನೀತಿ’ಗಳಿಂದಾಗಿ ಟೊಮೆಟೊ ಬೆಲೆ ಗಗನಕ್ಕೇರಿದೆ ಎಂದು ಕೇಂದ್ರ ಸರ್ಕಾರವನ್ನು ಕಾಂಗ್ರೆಸ್ ಮಂಗಳವಾರ ತರಾಟೆಗೆ ತೆಗೆದುಕೊಂಡಿತು.
ದರ ಏರಿಕೆ ಕುರಿತ ಮಾಧ್ಯಮ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಟೊಮೆಟೊ, ಈರುಳ್ಳಿ ಮತ್ತು ಆಲೂಗಡ್ಡೆ ಪ್ರಥಮ ಆದ್ಯತೆ ಎಂದು ಪ್ರಧಾನಿ ಹೇಳಿದ್ದರು. ಆದರೆ ಅವರ ದೋಷಯುಕ್ತ ನೀತಿಗಳಿಂದಾಗಿ ಮೊದಲು ಟೊಮೆಟೊವನ್ನು ಬೀದಿಗೆ ಎಸೆಯಲಾಗಿತ್ತು, ಈಗ ಕೆ.ಜಿಗೆ ನೂರು ರೂಪಾಯಿಯಂತೆ ಮಾರಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೆಟ್ಟಾ ಡಿಸೋಜಾ, ‘ಬಡವರ ತಟ್ಟೆಯಿಂದ ಧಾನ್ಯ, ಹಿಟ್ಟು, ಅಡುಗೆ ಎಣ್ಣೆ ಮಾಯವಾಗಿವೆ. ಈಗ ತರಕಾರಿಯೂ ಮಾಯವಾಗುತ್ತಿದೆ’ ಎಂದು ಹೇಳಿದ್ದಾರೆ.
ಈ ಮಧ್ಯೆ ‘ಟೊಮೆಟೊ ಬೆಲೆ ಏರಿಕೆ ತಾತ್ಕಾಲಿಕ ವಿದ್ಯಮಾನ. ಶೀಘ್ರವೇ ಬೆಲೆ ಇಳಿಕೆಯಾಗಲಿದೆ. ಪ್ರತಿ ವರ್ಷ ಈ ಸಂದರ್ಭದಲ್ಲಿ ದರ ಏರಿಕೆಯಾಗುತ್ತದೆ’ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.