ಲಖನೌ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ಪಕ್ಷವು ಒಂದು ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿದೆ.ಕಾಂಗ್ರೆಸ್ ಪಕ್ಷದ ಹೀನಾಯ ಸೋಲಿನ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯಾಧ್ಯಕ್ಷ ರಾಜ್ ಬಬ್ಬರ್ ರಾಜೀನಾಮೆ ನೀಡಿದ್ದಾರೆ.
ರಾಜ್ ಬಬ್ಬರ್ ಅವರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ರಾಜೀನಾಮೆ ಪತ್ರ ಕಳಿಸಿಕೊಟ್ಟಿದ್ದಾರೆ ಎಂದು ಜಿಲ್ಲಾ ಘಟಕದ ವಕ್ತಾರ ರಾಜೀವ್ ಬಕ್ಷಿ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
ಶುಕ್ರವಾರ ಟ್ವೀಟ್ ಮಾಡಿದ ಬಬ್ಬರ್, ಉತ್ತರ ಪ್ರದೇಶದಲ್ಲಿ ಫಲಿತಾಂಶ ನಿರಾಶಾದಾಯಕವಾದುದಕ್ಕೆ ನಾನುನೈತಿಕ ಹೊಣೆ ಹೊತ್ತಿದ್ದೇನೆ.ನಾನು ನಾಯಕರನ್ನು ಭೇಟಿಯಾಗಿ ನನ್ನ ನಿಲುವನ್ನು ತಿಳಿಸುವೆ. ಜನರ ವಿಶ್ವಾಸ ಗೆದ್ದು ವಿಜಯಿಯಾದವರಿಗೆ ನನ್ನ ಅಭಿನಂದನೆಗಳು ಎಂದಿದ್ದಾರೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ 80 ಸೀಟುಗಳಲ್ಲಿ ಸ್ಪರ್ಧಿಸಿದ್ದು, ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ಸೋನಿಯಾ ಗಾಂಧಿ ಮಾತ್ರ ಗೆಲುವು ಸಾಧಿಸಿದ್ದರು. ರಾಜ್ ಬಬ್ಬರ್ ಫತೇಪುರ್ ಸಿಕ್ರಿ ಕ್ಷೇತ್ರದಿಂದ ಸ್ಪರ್ಧಿಸಿದ್ದು ಬಿಜೆಪಿಯ ರಾಜ್ ಕುಮಾರ್ ಚಹರ್4,95,065 ಹೆಚ್ಚು ಮತಗಳ ಅಂತರದಲ್ಲಿ ಬಬ್ಬರ್ ಅವರನ್ನು ಸೋಲಿಸಿದ್ದರು.
ಬಿಜೆಪಿ ಮತ್ತು ಮೈತ್ರಿ ಪಕ್ಷವಾದ ಅಪ್ನಾ ದಳ್ (ಎಸ್) 60 ಸೀಟುಗಳನ್ನು ಗೆದ್ದುಕೊಂಡಿದ್ದು, ಎಸ್ಪಿ-ಬಿಎಸ್ಪಿ 15 ಸೀಟುಗಳನ್ನು ಗೆದ್ದಿದೆ.
ಇತ್ತ ಅಮೇಠಿಯಲ್ಲಿ ರಾಹುಲ್ ಗಾಂಧಿ ಪರಾಭವಗೊಂಡಿರುವುದರಿಂದ ಪಕ್ಷಕ್ಕೆ ದೊಡ್ಡ ಹೊಡೆತ ಸಿಕ್ಕಿದಂತಾಗಿದೆ.ಹೀಗಾಗಿ ಅಮೇಠಿ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಯೋಗೇಂದ್ರ ಮಿಶ್ರಾ ರಾಜೀನಾಮೆ ನೀಡಿದ್ದಾರೆ. ಕರ್ನಾಟಕದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಎಚ್.ಕೆ.ಪಾಟೀಲ ಮತ್ತು ಒಡಿಶಾದಲ್ಲಿ ಪಕ್ಷದ ಅಧ್ಯಕ್ಷ ನಿರಂಜನ್ಪಟ್ನಾಯಿಕ್ ರಾಜೀನಾಮೆ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.