
ರಾಹುಲ್, ಖರ್ಗೆ, ಶಶಿ ತರೂರ್
ನವದೆಹಲಿ: ಕಾಂಗ್ರೆಸ್ ಮುಖಂಡರೊಂದಿಗೆ ಅಂತರ ಕಾಯ್ದುಕೊಂಡಿದ್ದ ಸಂಸದ ಶಶಿ ತರೂರ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭಾ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ.
ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಖರ್ಗೆ ಅವರ ಸಂಸತ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಭಾಗವಹಿಸಿದ್ದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಶಶಿ ತರೂರ್, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಎರಡು ಗಂಟೆಗಳ ಕಾಲ ಸಭೆ ನಡೆಸಲಾಯಿತು. ಚುನಾವಣೆ, ಪಕ್ಷ ಸಂಘಟನೆ ಸೇರಿ ಹಲವು ವಿಷಯಗಳ ಕುರಿತು ರಚನಾತ್ಮಕವಾಗಿ ಚರ್ಚೆ ಮಾಡಲಾಯಿತು. ದೇಶದ ಜನರ ಸೇವೆ ಮಾಡುವ ದಾರಿಯಲ್ಲಿ ನಾವೆಲ್ಲ ಜತೆಯಾಗಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಕೇರಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ತರೂರ್ ಅವರನ್ನು ರಾಹುಲ್ ಗಾಂಧಿ ನಿರ್ಲಕ್ಷಿಸುತ್ತಿದ್ದಾರೆ ಎಂಬ ಅಸಮಾಧಾನ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಕೇರಳ ಕಾಂಗ್ರೆಸ್ನಲ್ಲಿ ನನಗೆ ಯಾವುದೇ ಭಿನಾಭಿಪ್ರಾಯವಿಲ್ಲ, ಆದರೆ ಕೇಂದ್ರದ ನಾಯಕರು ನನ್ನ ಕಡೆಗಣಿಸುತ್ತಿದ್ದು, ಕೇರಳದ ಮುಖ್ಯಮಂತ್ರಿ ಅಭ್ಯರ್ಥಿಯಾಗಿಯೂ ತನ್ನನ್ನು ಪರಿಗಣಿಸುತ್ತಿಲ್ಲ ಎಂದು ತರೂರ್ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದರು ಎನ್ನಲಾಗಿದೆ.
ತರೂರ್ ಮನವಿ ಮೇರೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಈ ಸಭೆಗೆ ವ್ಯವಸ್ಥೆ ಮಾಡಿದ್ದರು. ಆದರೆ ಸಭೆಯಲ್ಲಿ ವೇಣುಗೋಪಾಲ್ ಸೇರಿ ಇತರ ಯಾವುದೇ ನಾಯಕರು ಭಾಗವಹಿಸಿರಲಿಲ್ಲ. ಇದೇ ವೇಳೆ ತರೂರ್ ಅವರು ಸಿಪಿಐ(ಎಂ) ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂಬ ಊಹಾಪೋಹಗಳೂ ಕೇಳಿಬಂದಿದ್ದವು ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.