ನವದೆಹಲಿ: ಭಿನ್ನಮತೀಯ ಮುಖಂಡ ಆನಂದ್ ಶರ್ಮಾ ಅವರು ಮತದಾರರ ಪಟ್ಟಿ ತಯಾರಿಕೆ ಕುರಿತಂತೆ ಸಿಡಬ್ಲ್ಯುಸಿ ಸಭೆಯಲ್ಲಿ ಪ್ರಶ್ನೆಗಳನ್ನು ಎತ್ತಿದ್ದಾರೆ ಎಂದು ತಿಳಿದು ಬಂದಿದೆ. ಪಕ್ಷದ ಸಂವಿಧಾನದ ಪ್ರಕಾರವೇ ಪಟ್ಟಿ ಸಿದ್ಧಪಡಿಸಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ ಎನ್ನಲಾಗಿದೆ.
ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಮುನ್ನ ವರ್ಚುವಲ್ ಅಥವಾ ಭೌತಿಕ ಸಭೆಯನ್ನು ನಡೆಸಲಾಗಿಲ್ಲ ಎಂಬ ದೂರುಗಳು ತಮಗೆ ಬಂದಿವೆ. ಯಾವುದೇ ಪ್ರದೇಶ ಕಾಂಗ್ರೆಸ್ ಘಟಕವು ಪ್ರತಿನಿಧಿಗಳ ಪಟ್ಟಿಯನ್ನು ಪರಿಷ್ಕರಿಸಿಲ್ಲ ಮತ್ತು ಹಾಗಾಗಿದ್ದರೆ ಅದು ಚುನಾವಣಾ ಪ್ರಕ್ರಿಯೆಯ ಉಲ್ಲಂಘನೆಯಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ.
ಪಕ್ಷಕ್ಕೆ ಗಟ್ಟಿ ನಾಯಕತ್ವ ಬೇಕು ಎಂದು ಸೋನಿಯಾ ಅವರಿಗೆ ಈ ಹಿಂದೆ ಪತ್ರ ಬರೆದಿದ್ದ ‘ಜಿ–23’ ಮುಖಂಡರ ಗುಂಪಿನಲ್ಲಿ ಶರ್ಮಾ ಅವರು ಇದ್ದರು. ಹಿಮಾಚಲ ಪ್ರದೇಶ ಚುನಾವಣೆ ಚಾಲನಾ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ವಾರದ ಹಿಂದೆ ಅವರು ರಾಜೀನಾಮೆ ನೀಡಿದ್ದಾರೆ. ಪಕ್ಷದ ಹಿರಿಯ ಮುಖಂಡರಾಗಿದ್ದ ಗುಲಾಂ ನಬಿ ಆಜಾದ್ ಅವರು ಶುಕ್ರವಾರವಷ್ಟೇ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಸೋನಿಯಾ ಮತ್ತು ರಾಹುಲ್ ಬಗ್ಗೆ ಅವರು ರಾಜೀನಾಮೆ ಪತ್ರದಲ್ಲಿ ತೋಡಿಕೊಂಡಿರುವ ಅಸಮಾಧಾನ ಭಾರಿ ಸದ್ದು ಮಾಡಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.