ADVERTISEMENT

ಯುಪಿಎ ಅವಧಿಯಲ್ಲಿ ಅತಿ ಹೆಚ್ಚು ಭ್ರಷ್ಟರಿಗೆ ಶಿಕ್ಷೆ: ಕಪಿಲ್‌ ಸಿಬಲ್‌

ಪಿಟಿಐ
Published 4 ಏಪ್ರಿಲ್ 2023, 11:48 IST
Last Updated 4 ಏಪ್ರಿಲ್ 2023, 11:48 IST
ಕಪಿಲ್‌ ಸಿಬಲ್‌
ಕಪಿಲ್‌ ಸಿಬಲ್‌   

ನವದೆಹಲಿ: ‘ಯುಪಿಎ ಆಡಳಿತಾವಧಿಯಲ್ಲಿ ಭ್ರಷ್ಟರ ಪೈಕಿ ಅತಿ ಹೆಚ್ಚು ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಲೋಕಪಾಲ ಸ್ಥಾಪನೆಯಾದ ದಿನದಿಂದಲೂ ಆ ಸಂಸ್ಥೆ ಮೌನದ ಮೊರೆ ಹೋಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ವಿಚಾರದಲ್ಲಿ ಈಗಿನ ಕೇಂದ್ರ ಸರ್ಕಾರ ಎಷ್ಟು ಗಂಭೀರವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ’ ಎಂದು ರಾಜ್ಯಸಭೆ ಸದಸ್ಯ ಕಪಿಲ್‌ ಸಿಬಲ್‌ ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ನಡೆದಿದ್ದ ಸಿಬಿಐನ ವಜ್ರಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ, ‘ಭ್ರಷ್ಟಾಚಾರದ ವಿರುದ್ಧ ಕೆಲಸ ಮಾಡುವ ದಿಸೆಯಲ್ಲಿ ಈಗ ರಾಜಕೀಯ ಇಚ್ಛಾಶಕ್ತಿಗೇನೂ ಕೊರತೆ ಇಲ್ಲ. ಭ್ರಷ್ಟರು ಎಷ್ಟೇ ಪ್ರಭಾವಿಗಳಾಗಿರಲಿ. ಅವರ ವಿರುದ್ಧ ಅಧಿಕಾರಿಗಳು ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು’ ಎಂದು ಹೇಳಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಸಿಬಲ್‌, ‘ಭ್ರಷ್ಟರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳುವಂತೆ ಮೋದಿ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಜಿತೇಂದ್ರ ಸಿಂಗ್‌ ಅವರು 2016ರ ಮಾರ್ಚ್‌ನಲ್ಲಿ ಸಂಸತ್ತಿಗೆ ನೀಡಿದ್ದ ಮಾಹಿತಿ ಪ್ರಕಾರ 2013ರಲ್ಲಿ 1,136 ಮಂದಿ ವಿರುದ್ಧ 2014ರಲ್ಲಿ 993 ಜನರ ವಿರುದ್ಧ, 2015ರಲ್ಲಿ 878 ಹಾಗೂ 2016ರಲ್ಲಿ 71 ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ’ ಎಂದು ಹೇಳಿರುವುದನ್ನು ಉಲ್ಲೇಖಿಸಿದ್ದಾರೆ.

ADVERTISEMENT

‘ವ್ಯಕ್ತಿ ಸುಳ್ಳು ಹೇಳಬಹುದು. ಆದರೆ ಅಂಕಿ ಅಂಶಗಳಲ್ಲ. ಭ್ರಷ್ಟರನ್ನು ಯಾರು ರಕ್ಷಿಸುತ್ತಿದ್ದಾರೆ. ಯುಪಿಎ ಅವಧಿಯಲ್ಲಿ ಲೋಕಪಾಲ ಮಸೂದೆ ಮಂಡಿಸಲಾಗಿತ್ತು. ಹೀಗಿದ್ದರೂ ಲೋಕಪಾಲ ಸಂಸ್ಥೆಯನ್ನು ಸ್ಥಾಪಿಸಲು ಐದು ವರ್ಷಗಳು ತೆಗೆದುಕೊಂಡಿದ್ದು ಏಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.