ಲಖನೌ:ಪೊಲೀಸ್ ಅಧಿಕಾರಿಯ ಹತ್ಯೆ ಆರೋಪಿ, ಸಂಘಟನೆಯೊಂದರ ಜಿಲ್ಲಾ ಪ್ರಧಾನ ಕಾರ್ಯರ್ಶಿಯಾಗಿ ನೇಮಕವಾಗಿದ್ದು, ಆ ಸಮಾರಂಭದಲ್ಲಿ ಬಿಜೆಪಿ ಮುಖಂಡರು ಭಾಗವಹಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಪ್ರಧಾನ ಮಂತ್ರಿ ಜನ ಕಲ್ಯಾಣಕಾರಿ ಯೋಗಿ ಜಾಗೃತ ಅಭಿಯಾನ ಎಂಬ ಸಂಘಟನೆಗೆ2018ರ ಬುಲಂದ್ಶಹರ್ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಶೀಖರ್ ಅಗರ್ವಾಲ್ ಎಂಬಾತ ನೇಮಕವಾಗಿದ್ದಾನೆ. ಈತ ಈ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾನೆ.
ಆರೋಪಿಗೆ, ಬುಲಂದ್ಶಹರ್ ಬಿಜೆಪಿ ಮುಖಂಡ ಅನಿಲ್ ಸಿಸೋಡಿಯಾ ನೇಮಕ ಪತ್ರವನ್ನು ನೀಡುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜುಲೈ 14ರಂದು ಈ ಕಾರ್ಯಕ್ರಮ ನಡೆದಿದ್ದು, ಹಲವು ಬಿಜೆಪಿ ಮುಖಂಡರು ಅದರಲ್ಲಿ ಭಾಗವಹಿಸಿದ್ದರು.
ಈ ಚಿತ್ರ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಮುಜುಗರಕ್ಕೊಳಗಾದ ಬಿಜೆಪಿ, ಆ ಸಂಘಟನೆ ಜೊತೆಗೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೆ ನೀಡಿದೆ.
ಘಟನೆ ಸಂಬಂಧ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ಪೊಲೀಸ್ ಹತ್ಯೆ ಆರೋಪಿಯನ್ನು ಬಿಜೆಪಿ ಪೋಷಿಸುತ್ತಿದೆ. ಅಪರಾಧಿಗಳಿಗೆ ಪಕ್ಷ ಬೆಂಬಲ ನೀಡುತ್ತದೆ ಎಂದು ಟೀಕಿಸಿದ್ದಾರೆ. ಪ್ರಿಯಾಂಕಾ ಗಾಂಧಿ ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ವಿವಿಧ ಕಲ್ಯಾಣ ಯೋಜನೆಗಳ ಕುರಿತು ಜನಜಾಗೃತಿ ಬೆಳೆಸುವುದು ಸಂಘಟನೆಯ ಉದ್ದೇಶ. ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್, ರಮೇಶ್ ಪೋಖ್ರಿಯಾಲ್, ನರೇಂದ್ರ ತೋಮರ್,ಅಶ್ವಿನಿ ಚೌಬೆ ಅವರು ಸಂಘಟನೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.ಅಗರ್ವಾಲ್ ಕೂಡ ಬಿಜೆಪಿ ಸದಸ್ಯ ಎಂದು ಸಂಘಟನೆ ತನ್ನ ಪ್ರಾಣಾಳಿಕೆಯಲ್ಲಿ ತಿಳಿಸಿದೆ.
ಈ ಹಿಂದೆಯೂ, ಇದೇ ಪ್ರಕರಣದ ಆರೋಪಿಗಳು ಜಾಮೀನು ಪಡೆದು ಜೈಲಿನಿಂದ ಹೊರಬಂದಾಗ ಬಿಜೆಪಿ ಕಾರ್ಯಕರ್ತರು ಅವರನ್ನು ಗೋ ರಕ್ಷಕರ ಹೆಸರಿನಲ್ಲಿ ಹಾರ ಹಾಕಿ ಸನ್ಮಾನ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.