ADVERTISEMENT

ದಿನಪತ್ರಿಕೆಗಳಿಂದ ಸೋಂಕು ಹರಡಲ್ಲ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 19:49 IST
Last Updated 19 ಅಕ್ಟೋಬರ್ 2020, 19:49 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ‘ದಿನಪತ್ರಿಕೆಗಳಿಂದ ಕೊರೊನಾವೈರಸ್‌ ಹರಡುವುದಿಲ್ಲ’ ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರು ತಮ್ಮ ವಾರದ ವಿಡಿಯೊ ಕಾರ್ಯಕ್ರಮ ‘ಭಾನುವಾರದ ಸಂವಾದ’ದಲ್ಲಿ ಹೇಳಿದ್ದಾರೆ.

ಸಾರ್ವಜನಿಕರು ವಿವಿಧ ಮಾಧ್ಯಮಗಳ ಮೂಲಕ ಕೇಳಲಾದ ಪ್ರಶ್ನೆಗಳಿಗೆ ಹರ್ಷವರ್ಧನ್ ಅವರು, ಭಾನುವಾರದ ಸಂವಾದದಲ್ಲಿ ಉತ್ತರಿಸುತ್ತಾರೆ. ಪಲ್ಲವಿ ಝಾ ಎಂಬುವವರು ದಿನಪತ್ರಿಕೆಗಳ ಬಳಕೆ ಬಗ್ಗೆ ಕೇಳಿದ್ದ ಪ್ರಶ್ನೆಗೆ, ಸಚಿವರು ಈ ಉತ್ತರ ನೀಡಿದ್ದಾರೆ.

‘ದಿನಪತ್ರಿಕೆ ಇಲ್ಲದೆ ಬೆಳಗಿನ ಚಹಾ ರುಚಿಸುವುದೇ ಇಲ್ಲ. ಕೊರೊನಾ ಸೋಂಕು ತಗಲಬಹುದು ಎಂಬ ಭಯದಲ್ಲಿ 8 ತಿಂಗಳಿಂದ ಮನೆಗೆ ದಿನಪತ್ರಿಕೆ ತರಿಸುತ್ತಿಲ್ಲ. ಈಗಲಾದರೂ ನಾವು ದಿನಪತ್ರಿಕೆ ಹಾಕಿಸಿಕೊಳ್ಳಬಹುದೇ’ ಎಂದು ಪಲ್ಲವಿ ಅವರು ಪ್ರಶ್ನಿಸಿದ್ದರು.

ADVERTISEMENT

‘ದಿನಪತ್ರಿಕೆ ಇಲ್ಲದೆ ಬೆಳಗಿನ ಚಹಾ ರುಚಿಸುವುದೇ ಇಲ್ಲ ಎನ್ನುವುದಾದರೆ, ನೀವು ತಕ್ಷಣವೇ ನಿಮ್ಮ ಹ್ಯಾಕರ್‌ಗೆ ಕರೆ ಮಾಡಿ. ನಾಳೆಯಿಂದ ದಿನಪತ್ರಿಕೆ ಹಾಕಲು ಹೇಳಿ. ಏಕೆಂದರೆ, ದಿನಪತ್ರಿಕೆ
ಗಳ ಮೂಲಕ ಕೊರೊನಾ ವೈರಸ್ ಹರಡುತ್ತದೆ ಎಂಬ ಮಾತು ನಿರಾಧಾರವಾದುದು. ಕೊರೊನಾವೈರಸ್‌ ಉಸಿರಾಟಕ್ಕೆ ಸಂಬಂಧಿಸಿದ ವೈರಾಣು. ಸೋಂಕಿತ ವ್ಯಕ್ತಿಯ ಸೀನು, ಕೆಮ್ಮು ಮೊದಲಾದವುಗಳ ಮೂಲಕ ಹೊರಗೆ ಬರುತ್ತವೆ. ಅಂತಹ ವ್ಯಕ್ತಿಯು ಸೀನಿದಾಗ ಅಥವಾ ಕೆಮ್ಮಿದಾಗ ಹೊರಬರುವ ಕಣಗಳಲ್ಲಿ ಕೊರೊನಾವೈರಸ್ ಇರುತ್ತದೆ. ಈ ಕಣಗಳ ಮೂಲಕ ವೈರಸ್‌ ಹರಡುತ್ತದೆ. ಈ ವೈರಸ್ ದಿನಪತ್ರಿಕೆಗಳ ಮೂಲಕ ಹರಡುವುದಿಲ್ಲ’ ಎಂದು ಸಚಿವರು ಉತ್ತರಿಸಿದ್ದಾರೆ.

‘ದಿನಪತ್ರಿಕೆಗಳ ಮೂಲಕ ಕೊರೊನಾವೈರಸ್ ಹರಡುತ್ತದೆ ಎಂಬುದನ್ನು ಈವರೆಗೆ ಯಾವುದೇ ವೈಜ್ಞಾನಿಕ ಅಧ್ಯಯನಗಳೂ ಸಾಬೀತು ಮಾಡಿಲ್ಲ. ಹೀಗಾಗಿ ಕೋವಿಡ್‌ ಸಂದರ್ಭದಲ್ಲೂ ದಿನಪತ್ರಿಕೆ ಓದುವುದು ಸಂಪೂರ್ಣ ಸುರಕ್ಷಿತ’ ಎಂದು ಹರ್ಷವರ್ಧನ್ ಅವರು ಹೇಳಿದ್ದಾರೆ.

ದಿನಪತ್ರಿಕೆಗಳ ಮೂಲಕ ಕೊರೊನಾವೈರಸ್ ಹರಡುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾರ್ಚ್‌ ತಿಂಗಳಿನಲ್ಲಿಯೇ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.