ನವದೆಹಲಿ: ಗುರುವಾರ ಸಂಜೆ ವರೆಗೂ ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಪ್ರಕರಣಗಳು 5,734 ತಲುಪಿದೆ. ಕಳೆದ 24 ಗಂಟೆಗಳಲ್ಲಿ549 ಹೊಸ ಪ್ರಕರಣಗಳು ವರದಿಯಾಗಿರುವುದಾಗಿ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್ ಮಾಹಿತಿ ನೀಡಿದ್ದಾರೆ.
24 ಗಂಟೆಗಳಲ್ಲಿ 17 ಮಂದಿ ಸೋಂಕಿತರು ಸಾವಿಗೀಡಾಗಿದ್ದಾರೆ ಹಾಗೂ ಈವರೆಗೂ ಕೋವಿಡ್–19ಗೆ ಬಲಿಯಾದವರ ಸಂಖ್ಯೆ 166ಕ್ಕೆ ಏರಿಕೆಯಾಗಿದೆ. 473 ಮಂದಿ ಸೋಂಕಿನಿಂದ ಗುಣಮಖರಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಮಹಾರಾಷ್ಟ್ರದಲ್ಲಿ 1,135 ಪ್ರಕರಗಳು ದಾಖಲಾಗಿದ್ದು, 72 ಮಂದಿ ಸಾವಿಗೀಡಾಗಿದ್ದಾರೆ. ಕರ್ನಾಟಕದಲ್ಲಿ 181 ಪ್ರಕರಣಗಳು ವರದಿಯಾಗಿವೆ ಹಾಗೂ 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಮಾಸ್ಕ್ಗಳು, ವೆಂಟಿಲೇಟರ್ಗಳು ಹಾಗೂ ರಕ್ಷಣಾ ಕವಚಗಳ (ಪಿಪಿಇ) ಪೂರೈಕೆ ಶುರುವಾಗಿದೆ. ದೇಶದ 20 ತಯಾರಿಕಾ ಕಂಪನಿಗಳಿಗೆ 1.7 ಕೋಟಿ ಪಿಪಿಇಗಳನ್ನು ಸಿದ್ಧಪಡಿಸಿಕೊಡುವಂತೆ ಕೇಳಲಾಗಿದ್ದು, ಪೂರೈಕೆ ನಡೆಯುತ್ತಿದೆ. ಇದರೊಂದಿಗೆ 49,000 ವೆಂಟಿಲೇಟರ್ಗಳಿಗೆ ಬೇಡಿಕೆ ಇಡಲಾಗಿದೆ ಎಂದು ತಿಳಿಸಿದ್ದಾರೆ.
ಭಾರತೀಯ ರೈಲ್ವೆ 5,000 ಕೋಚ್ಗಳನ್ನು ಐಸೊಲೇಷನ್ ಘಟಕಗಳಾಗಿ ರೂಪಿಸುತ್ತಿದ್ದು, ಈವರೆಗೂ 3,250 ಕೋಚ್ಗಳನ್ನು ರೂಪಾಂತರಿಸಲಾಗಿದೆ. ಒಟ್ಟು 80,000 ಐಸೊಲೇಷನ್ ಬೆಡ್ಗಳನ್ನು ಸಜ್ಜುಗೊಳಿಸುವ ಸಿದ್ಧತೆಯಲ್ಲಿದೆ. ಕೊರೊನಾ ವೈರಸ್ ಸೋಂಕು ನಿಯಂತ್ರಣ ಕಾರ್ಯಗಳಿಗಾಗಿಯೇ ರೈಲ್ವೆ 2,500 ವೈದ್ಯರು ಹಾಗೂ 35,000 ಪ್ಯಾರಾಮೆಡಿಕಲ್ ಸಿಬ್ಬಂದಿಯನ್ನು ನಿಯೋಜಿಸಿದೆ.
ಈವರೆಗೂ ಐಸಿಎಂಆರ್ 1,30,000 ಮಾದರಿಗಳಿಗೆ ಕೋವಿಡ್ –19 ಪರೀಕ್ಷೆ ನಡೆಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.