ಹೈದರಾಬಾದ್: ತೆಲಂಗಾಣದ ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದ ಕೋವಿಡ್-19 ಸೋಂಕಿತರೊಬ್ಬರ ಶವವನ್ನು ಆಟೊರಿಕ್ಷಾದಲ್ಲಿಯೇ ಸ್ಮಶಾನಕ್ಕೆಸಾಗಿಸಲಾಗಿದೆ.
50 ವರ್ಷದ ಕೋವಿಡ್ ಸೋಂಕಿತರೊಬ್ಬರ ಶವವನ್ನು ಯಾವುದೇ ಅಂತಿಮ ವಿಧಿವಿಧಾನ ಇಲ್ಲದೆ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದ್ದು, ಆಂಬ್ಯುಲೆನ್ಸ್ ಇಲ್ಲದ ಕಾರಣ ಸಂಬಂಧಿಕರು ಆಟೊರಿಕ್ಷಾದಲ್ಲಿಯೇ ಶವವನ್ನು ಸ್ಮಶಾನದವರೆಗೂಸಾಗಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಸಂಬಂಧಿಯೊಬ್ಬರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಕೋರಿಕೆಯ ಮೇರೆಗೆ ಶವವನ್ನು ಹಸ್ತಾಂತರಿಸಲಾಗಿದೆ ಎಂದು ನಿಜಾಮಾಬಾದ್ ಸರ್ಕಾರಿ ಆಸ್ಪತ್ರೆ ಅಧೀಕ್ಷಕ ಡಾ.ನಾಗೇಶ್ವರ ರಾವ್ ತಿಳಿಸಿದ್ದಾರೆ.
'ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಸಂಬಂಧಿಯೊಬ್ಬರು ನಮ್ಮ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಕೋರಿಕೆಯ ಮೇರೆಗೆ ನಾವು ಶವವನ್ನು ಹಸ್ತಾಂತರಿಸಿದೆವು. ಆಂಬ್ಯುಲೆನ್ಸ್ಗಾಗಿ ಕಾಯದೇ ದೇಹವನ್ನು ಆಟೊದಲ್ಲಿಯೇ ತೆಗೆದುಕೊಂಡು ಅವರು ಹೋಗಿದ್ದಾರೆ' ಎಂದು ಡಾ.ನಾಗೇಶ್ವರ ರಾವ್ ಸ್ಪಷ್ಟನೆ ನೀಡಿದ್ದಾರೆ.
ಆಟೊರಿಕ್ಷಾದಲ್ಲಿ ಕೋವಿಡ್ ಸೋಂಕಿತ ವ್ಯಕ್ತಿಯ ಶವವನ್ನು ಸಾಗಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.