ಬಹರೈಚ್: ಕುಂಭ ಮೇಳ ಅಥವಾ ದೇವಾಲಯದಿಂದಾಗಿ ದೇಶ ಅಭಿವೃದ್ದಿಯಾಗಲ್ಲ. ದೇಶ ಅಭಿವೃದ್ಧಿ ಹೊಂದಬೇಕಾದರೆ ಸಂವಿಧಾನದ ಅನುಷ್ಠಾನ ಆಗಬೇಕು ಎಂದು ಬಿಜೆಪಿಯ ಮಾಜಿ ನಾಯಕಿ ಸಾವಿತ್ರಿಬಾಯಿ ಫುಲೆ ಹೇಳಿದ್ದಾರೆ.
ಪರಿಶಿಷ್ಟ ಜಾತಿ ಮತ್ತು ವರ್ಗದವರು ತಮ್ಮ ಹಕ್ಕಿಗಾಗಿ ಹೋರಾಡುತ್ತಿರುವಾಗ ಉತ್ತರ ಪ್ರದೇಶ ಸರ್ಕಾರ ಕುಂಭ ಮೇಳ ಮತ್ತು ದೇವಾಲಯಗಳಿಗೆ ಹಣ ಖರ್ಚು ಮಾಡುತ್ತಿದೆ ಎಂದು ಫುಲೆ ಯೋಗಿ ಆದಿತ್ಯನಾಥರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕುಂಭ ಅಥವಾ ದೇವಾಲಯಗಳಿಗೆ ಖರ್ಚು ಮಾಡುವುದರಿಂದ ಪರಿಶಿಷ್ಟ ಜಾತಿ, ವರ್ಗ ಮತ್ತು ಮುಸ್ಲಿಂ ಸಮುದಾಯದವರ ಏಳಿಗೆಯಾಗುತ್ತದೆಯೇ? ಸರ್ಕಾರ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದಕ್ಕಾಗಿ ಕುಂಭ ಮೇಳಕ್ಕೆ ಖರ್ಚು ಮಾಡುತ್ತಿದೆ. ದೇವರು ಅಥವಾ ದೇವಾಲಯದಿಂದ ಸರ್ಕಾರ ಆಡಳಿತ ನಡೆಯುವುದಿಲ್ಲ.ಅದು ನಡೆಯಬೇಕಾದರೆ ಸಂವಿಧಾನ ಬೇಕು.
ಉತ್ತರ ಪ್ರದೇಶದ ಕಾನೂನು ಸಂಪೂರ್ಣ ಕುಂಠಿತವಾಗಿದೆ.ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ರಾಜ್ಯದ ಆಡಳಿತ ನಡೆಸಲು ಸಮರ್ಥರು ಅಲ್ಲ ಎಂದು ವಿವಿಧ ಸುದ್ದಿ ಪತ್ರಿಕೆಗಳ ವರದಿ ನೋಡಿದರೆ ಗೊತ್ತಾಗುತ್ತದೆ ಎಂದಿದ್ದಾರೆ ಫುಲೆ.
2014ರಲ್ಲಿ ಬಹರೈಚ್ ಲೋಕಸಭಾ ಕ್ಷೇತ್ರದಿಂದ ಚುನಾವಣೆ ಗೆದ್ದಿದ್ದ ಫುಲೆ, ಮೀಸಲಾತಿಗಾಗಿ ಬಿಜೆಪಿ ಯಾವುದೇ ಕಾರ್ಯ ಮಾಡುತ್ತಿಲ್ಲ.ಬಿಜೆಪಿ ಸಮಾಜವನ್ನು ಒಡೆಯುತ್ತಿದೆ ಎಂದು ಆರೋಪಿಸಿ ಡಿಸೆಂಬರ್ 6 ರಂದು ಪಕ್ಷ ತೊರೆದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.