ADVERTISEMENT

ಗಾಂಜಾ ನಶೆಯಲ್ಲಿ ಬೇಕಾಬಿಟ್ಟಿ ಕಾರು ಓಡಿಸಿದ ದಂಪತಿ ತಡೆಯಲು ಕ್ರೇನ್ ಬಳಕೆ

ಪಿಟಿಐ
Published 7 ಫೆಬ್ರುವರಿ 2024, 13:08 IST
Last Updated 7 ಫೆಬ್ರುವರಿ 2024, 13:08 IST
<div class="paragraphs"><p>X ಚಿತ್ರ</p></div>
   

X ಚಿತ್ರ

ಕೊಟ್ಟಾಯಂ: ಮಾದಕದ್ರವ್ಯದ ನಶೆಯಲ್ಲಿದ್ದ ದಂಪತಿ ತಮ್ಮ ಕಾರನ್ನು ಬೇಕಾಬಿಟ್ಟಿಯಾಗಿ ಮತ್ತು ಅಜಾಗರೂಕತೆಯಿಂದ ಓಡಿಸಿದ ಪರಿಣಾಮ, ಮಾರ್ಗದ ಮಧ್ಯೆ ಸಿಕ್ಕ ಹಲವು ಕಾರುಗಳಿಗೆ ಗುದ್ದಿ ಜಖಂಗೊಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಯಂಕುಲಮ್‌ನವರಾದ ಅರುಣ್ ಹಾಗೂ ಅವರ ಪತ್ನಿ ಧನುಶಾ ಸದ್ಯ ಚಿಂಗವನಮ್ ಪೊಲೀಸರ ಅತಿಥಿಯಾಗಿದ್ದಾರೆ. 

ADVERTISEMENT

ಮರಿಯಪ್ಪಲೈ ಹಾಗೂ ಚಿಂಗವನಮ್ ನಡುವಿನ ಅತ್ಯಂತ ವಾಹನದಟ್ಟಣೆಯ ಎಂಸಿ ರಸ್ತೆಯಲ್ಲಿ ವೇಗವಾಗಿ ಮತ್ತು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿದ ಈ ದಂಪತಿ, ನಶೆಯಲ್ಲಿದ್ದರು. ಮಾರ್ಗ ಮಧ್ಯೆ ಸಿಕ್ಕ ವಾಹನಗಳಿಗೆ ಡಿಕ್ಕಿಪಡಿಸಿದ ಇವರನ್ನು ತಡೆಯಲು ಸ್ಥಳೀಯರನ್ನೂ ಒಳಗೊಂಡು ಪ್ರಯಾಸಪಡಲಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಕಾರನ್ನು ತಡೆಯಲು ತಡೆಯಲು ಅಂತಿಮ ಕಸರತ್ತಾಗಿ ಕ್ರೇನ್ ನೆರವು ಪಡೆಯಲಾಯಿತು. ದಂಪತಿಯ ಕಾರು ಬರುವ ಮಾರ್ಗದಲ್ಲಿ ಕ್ರೇನ್ ಅನ್ನು ಅಡ್ಡಲಾಗಿ ನಿಲ್ಲಿಸಲಾಗಿತ್ತು. ಅಲ್ಲಿ ಕಾರು ನಿಲ್ಲಿಸಿದ ಇವರನ್ನು ವಶಕ್ಕೆ ಪಡೆಯಲು ಮುಂದಾದೆವು. ಆದರೆ ಕಾರಿನಿಂದ ಹೊರಕ್ಕೆ ಬರಲು ಇವರು ನಿರಾಕರಿಸಿದ್ದು, ಕೆಲಕಾಲ ಗೊಂದಲ ಮೂಡಿಸಿತ್ತು ಎಂದು ಪೊಲೀಸರು ವಿವರಿಸಿದ್ದಾರೆ.

ಬಲವಂತವಾಗಿ ಹೊರಕ್ಕೆ ಎಳೆದ ತಕ್ಷಣ ದಂಪತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅವರು ಮಾದಕದ್ರವ್ಯದ ಮತ್ತಿನಲ್ಲಿರುವುದನ್ನು ಖಚಿತಪಡಿಸಲಾಯಿತು. ಇದಕ್ಕೆ ಪೂರಕವಾಗಿ ಇವರ ಕಾರಿನಲ್ಲಿ 5 ಗ್ರಾಂ ಗಾಂಜಾ ಪತ್ತೆಯಾಗಿದೆ. ಅದನ್ನು ವಶಕ್ಕೆ ಪಡೆಯಲಾಗಿದೆ. ಈ ಘಟನೆಯಿಂದಾಗಿ ಸಂಚಾರ ದಟ್ಟಣೆ ಉಂಟಾಗಿ, ಕೆಲ ಕಾಲ ಸಮಸ್ಯೆ ಎದುರಾಯಿತು ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.