ADVERTISEMENT

ಕೊವ್ಯಾಕ್ಸಿನ್‌ಗೆ ಅನುಮೋದನೆ ನೀಡಿಕೆ ಅಪಾಯಕಾರಿಯಾಗಬಹುದು: ಶಶಿ ತರೂರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜನವರಿ 2021, 8:20 IST
Last Updated 3 ಜನವರಿ 2021, 8:20 IST
ಕಾಂಗ್ರೆಸ್ ಸಂಸದ ಶಶಿ ತರೂರ್
ಕಾಂಗ್ರೆಸ್ ಸಂಸದ ಶಶಿ ತರೂರ್   

ತಿರುವನಂತಪುರ: ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ದೇಶೀಯವಾಗಿ ಅಭಿವೃದ್ಧಿಸಿದ ಕೊವ್ಯಾಕ್ಸಿನ್ ಲಸಿಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿರುವುದನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಪ್ರಶ್ನಿಸಿದ್ದಾರೆ.

ಕೊವಾಕ್ಸಿನ್ ಇನ್ನೂ ಮೂರನೇ ಹಂತದ ಪ್ರಯೋಗಗಳನ್ನು ಮುಗಿಸಿಲ್ಲ. ಈ ನಿರ್ಧಾರವು ಅಕಾಲಿಕವಾಗಿದ್ದು, ಅಪಾಯಕಾರಿ ಎನಿಸಿಕೊಳ್ಳಬಹುದು ಎಂದು ಎಚ್ಚರಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರಲ್ಲೂ ಸ್ಪಷ್ಟನೆಯನ್ನು ಬಯಸಿದ್ದಾರೆ.

ADVERTISEMENT

ಸಂಪೂರ್ಣ ಕ್ಲಿನಿಕಲ್ ಪ್ರಯೋಗಗಳು ಮುಗಿಯುವ ವರೆಗೂ ಇದರ ಬಳಕೆಯನ್ನು ತಪ್ಪಿಸಬೇಕು. ಈ ಮಧ್ಯೆ ಅಸ್ಟ್ರಾಜೆನೆಕಾ ಲಸಿಕೆಯೂಂದಿಗೆ ದೇಶವು ಮುಂದುವರಿಯಬಹುದು ಎಂದು ಶಶಿ ತರೂರ್ ತಿಳಿಸಿದರು.

ಟ್ವೀಟ್‌ವೊಂದನ್ನು ಉಲ್ಲೇಖಿಸುತ್ತಾ ಶಶಿ ತರೂರ್ ಈ ರೀತಿಯಾಗಿ ನುಡಿದರು. ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನು ಒಡ್ಡುವ ದೊಡ್ಡ ಲಾಬಿ ಇದರ ಹಿಂದೆಯಿದೆ ಎಂದು ಆರೋಪಿಸಲಾಗಿದೆ.

ಭಾನುವಾರದಂದು ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ಸಂಸ್ಥೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ಷರುತ್ತಬದ್ಧ ಲಸಿಕೆ ಬಳಕೆಗೆ ಡಿಸಿಜಿಐ ಅನುಮೋದನೆ ನೀಡಿತ್ತು.

ಭಾರತ್ ಬಯೋಟೆಕ್ ಲಸಿಕೆಯ ಮೂರನೇ ಹಂತದ ಪರಿಣಾಮಕಾರಿತ್ವದ ಅಂಕಿಅಂಶವು ಇನ್ನಷ್ಟೇ ಹೊರಬರಬೇಕಿದೆ. ಅಲ್ಲದೆ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ಪ್ರೊಟೊಕಾಲ್ ನಡೆಸಲು ಡಿಸಿಜಿಐ ಅನುಮತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.